ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಅವರ ಚೊಚ್ಚಲ ಚಿತ್ರ 'ಅಪ್ಪು' ಮಾರ್ಚ್ 14 ರಂದು ಅವರ 50ನೇ ಜನ್ಮ ದಿನಾಚರಣೆಯಂದು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಪ್ಪು ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಿರ್ದೇಶಕ ಪುರಿ ಜಗನ್ನಾಥ್, ಈ ಯೋಜನೆ ಹೇಗೆ ಸೆಟ್ಟೇರಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. 'ಶಿವಣ್ಣ ಅವರಿಗೆ ನಾನು ಧನ್ಯವಾದ ಹೇಳಬೇಕು ಏಕೆಂದರೆ, ಅಪ್ಪು ಚಿತ್ರಕ್ಕಾಗಿ ಅವರೇ ಪುನೀತ್ ರಾಜ್ಕುಮಾರ್ ಅವರನ್ನು ನನಗೆ ಪರಿಚಯಿಸಿದರು' ಎಂದು ಹೇಳಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್, ಜಗದೀಶ್ ಫಿಲ್ಮ್ಸ್ ಸಹಯೋಗದೊಂದಿಗೆ ಅಪ್ಪು ಚಿತ್ರದ ರೀರಿಲೀಸ್ ಅನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಈ ಮೂಲಕ ಅಭಿಮಾನಿಗಳ ಪಾಲಿನ ಅಪ್ಪು ಆಗಿರುವ ಪುನೀತ್ ರಾಜ್ಕುಮಾರ್ ಅವರನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ನೋಡುವ ಅವಕಾಶ ಲಭ್ಯವಾಗಲಿದೆ.
ಈ ಕುರಿತು ವಿಡಿಯೋ ಸಂದೇಶ ನೀಡಿರುವ ಪುರಿ ಜಗನ್ನಾಥ್, ರಾಜ್ಕುಮಾರ್ ಕುಟುಂಬದೊಂದಿಗಿನ ತಮ್ಮ ಒಡನಾಟ ನೆನಪಿಸಿಕೊಂಡಿದ್ದಾರೆ. 'ಶಿವಣ್ಣ ಅವರು ನನಗೆ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರನ್ನು ಪರಿಚಯಿಸಿದರು ಮತ್ತು ನಾನು ಪುನೀತ್ ರಾಜ್ಕುಮಾರ್ ಎಂಬ ಸುಂದರ ಆತ್ಮವನ್ನು ಭೇಟಿಯಾದದ್ದು ಹೀಗೆ. ಪುನೀತ್ ಬಹುಮುಖ ಪ್ರತಿಭೆಯಾಗಿದ್ದರು ಮತ್ತು ಅವರು ಯಾವಾಗಲೂ ಕನ್ನಡ ಚಿತ್ರರಂಗದ ರತ್ನವಾಗಿ ಉಳಿಯುತ್ತಾರೆ. ಸಾಮಾಜಿಕ ಕಾರ್ಯಗಳಿಗೆ ಅವರ ಸಮರ್ಪಣೆ ಯಾವಾಗಲೂ ಸ್ಮರಣೀಯ' ಎಂದರು.
ಅಪ್ಪು ಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿ ಮತ್ತು ಕನ್ನಡ ಚಿತ್ರರಂಗದಲ್ಲಿ ಮತ್ತು ಅನೇಕರ ಹೃದಯಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಪುನೀತ್ ರಾಜ್ಕುಮಾರ್ ಅವರ ವೃತ್ತಿಜೀವನವನ್ನು ಮೆಲುಕು ಹಾಕಿ ಎಂದಿದ್ದಾರೆ.
2002ರ ಏಪ್ರಿಲ್ 26 ರಂದು ಬಿಡುಗಡೆಯಾದ ಅಪ್ಪು ಚಿತ್ರವನ್ನು ಪಾರ್ವತಮ್ಮ ರಾಜ್ಕುಮಾರ್ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ನಟಿ ರಕ್ಷಿತಾ ಕೂಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಚಿತ್ರಕ್ಕೆ ಗುರುಕಿರಣ್ ಅವರು ಸಂಗೀತ ಸಂಯೋಜಿಸಿದ್ದು, ಪುನೀತ್ ರಾಜ್ಕುಮಾರ್ ಅವರೇ ಹಾಡಿರುವ ಮತ್ತು ನಟ-ನಿರ್ದೇಶಕ ಉಪೇಂದ್ರ ಬರೆದ 'ತಾಲಿಬಾನ್ ಅಲ್ಲಾ ಅಲ್ಲಾ' ಎಂಬ ಇಂದಿಗೂ ಜನಪ್ರಿಯವಾಗಿದೆ.