ಇತ್ತೀಚಿಗೆ ವಯೋಸಹಜ ಸಮಸ್ಯೆಗಳಿಂದ 86 ನೇ ವಯಸ್ಸಿನಲ್ಲಿ ನಿಧನರಾದ ತನ್ನ ತಾಯಿ ಸುವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಧರ್ಮದ ಪ್ರಕಾರ ನೆರೆವೇರಿಸಿದ ನಂತರ ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ.
ಸುವರ್ಣ ಲತಾ ಅವರ ನಂಬಿಕೆಯಂತೆ ಮಾರ್ಚ್ 31 ರಂದು ಕ್ರಿಶ್ಚಿಯನ್ ಧರ್ಮದ ಪ್ರಕಾರ ಬೆಂಗಳೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು.
ನೆಟ್ಟಿಗರು 2025 ರ ಸಂದರ್ಶನದ ಕ್ಲಿಪ್ಗಳನ್ನು ಅಂತ್ಯಕ್ರಿಯೆಯೊಂದಿಗೆ ಜೋಡಿಸುವ ಮೂಲಕ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟಕ್ಕೂ ನೆಟ್ಟಿಗರ ಟೀಕೆಗೂ ಕಾರಣವಿದೆ. ಸಂದರ್ಶನದಲ್ಲಿ ನಾನು ನಾಸ್ತಿಕ ಎಂದು ಪ್ರಕಾಶ್ ರಾಜ್ ಹೇಳಿಕೊಂಡಿದ್ದರು.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ನನ್ನ ವೈಯಕ್ತಿಕ ನಂಬಿಕೆಗಳು ತನ್ನ ತಾಯಿಯ ಇಚ್ಚೆಗೆ ತೊಡಕಾಗುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ "ಹೌದು. ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಆಕೆಯ ನಂಬಿಕೆಯ ಪ್ರಕಾರ ಅಂತ್ಯಸಂಸ್ಕಾರ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಮೂಲಕ ದ್ವೇಷಪೂರಿತ ಕಾಮೆಂಟ್ ಗಳಿಗೆ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಗೆ ಅವರ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ನಷ್ಟದ ಹೊರತಾಗಿಯೂ, ಪ್ರಕಾಶ್ ರಾಜ್ ಭಾಷೆಯಾದ್ಯಂತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಇತ್ತೀಚೆಗೆ ದೇವರ: Part 1 ಮತ್ತು ಸೀತಾ ಪಯಣಂನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಮತ್ತು ಸ್ಟಾರ್ ಮಹೇಶ್ ಬಾಬು ಕಾಂಬಿನೇಷ್ ನಲ್ಲಿ ಮೂಡಿಬರಲಿರುವ ವಾರಣಾಸಿಯಲ್ಲಿಯೂ ಪ್ರಕಾಶ್ ರಾಜ್ ಅಭಿನಯಿಸುವ ಸುದ್ದಿ ಹೊರಬಂದಿದೆ.