ಕನ್ನಡ ಚಲನಚಿತ್ರೋದ್ಯಮದ ಕನಸುಗಾರ ರವಿಚಂದ್ರನ್ ಅವರ ಬೃಹತ್ ಬಜೆಟ್ನ ಸಿನಿಮಾ ʻಶಾಂತಿ ಕ್ರಾಂತಿʼ ರಿಲೀಸ್ ಆಗಿ ಮೂರು ದಶಕಗಳು ಕಳೆದಿವೆ. ಅಂದು ಚಿತ್ರರಂಗದಲ್ಲೇ ಹೊಸ ಸಂಚಲನ ಮೂಡಿಸಿದ್ದ ಈ ಸಿನಿಮಾ, ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಾಣದೆ ರವಿಚಂದ್ರನ್ ಅವರಿಗೆ ಕಷ್ಟದ ದಿನಗಳನ್ನ ತಂದುಕೊಟ್ಟಿತ್ತು. ಆದರೆ ಇದೀಗ ಮೂರು ದಶಕಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಮತ್ತೆ ಭಾರೀ ಸದ್ದು ಮಾಡ್ತಿದೆ.
ರವಿಚಂದ್ರನ್ ತುಂಬಾ ಕಷ್ಟಪಟ್ಟು ಅಷ್ಟೇ ಇಷ್ಟಪಟ್ಟು ವರ್ಷಗಳವರೆಗೆ ಅದಕ್ಕೇಂದೆ ತಮ್ಮ ಅತ್ಯಮೂಲ್ಯ ಕ್ಷಣಗಳನ್ನು ವಿನಿಯೋಗಿಸಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಮಿಸಿದಂತ ಚಿತ್ರ ಶಾಂತಿ ಕ್ರಾಂತಿ. ಆದರೆ ಆ ಸಿನಿಮಾ ಅವರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಲ್ಲದೆ ವೃತ್ತಿ ಜೀವನದಲ್ಲಿ ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುವಂತೆ ಮಾಡಿತ್ತು. ಆ ನೋವು ಹಾಗೂ ಅಘಾತದಿಂದ ಹೊರಬರಲು ಹಾಗೂ ಚೇತರಿಸಿಕೊಳ್ಳಲು ರವಿಚಂದ್ರನ್ ಅವರಿಗೆ ದಶಕಗಳೇ ಬೇಕಾದವಂತೆ.ಇದನ್ನೆಲ್ಲ ಅವರೇ ಹೇಳಿಕೊಂಡಿದ್ದಾರೆ.
ಆದರೆ ಈಗ ಕೇಳಿ ಬರುತ್ತಿರುವ ಹೊಸ ವಿಷಯ ಎಂದರೆ ರವಿಚಂದ್ರನ್ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ʻಶಾಂತಿ ಕ್ರಾಂತಿʼ ಸಿನಿಮಾವನ್ನ ಮತ್ತೆ ಬೆಳ್ಳಿಪರದೆಯ ಮೇಲೆ ತರುವಂತೆ ಸೋಶಿಯಲ್ ಮೀಡಿಯಾದಲ್ಲಿ ರವಿಚಂದ್ರನ್ ಅವರಿಗೆ ಟ್ಯಾಗ್ ಮಾಡಿ ಅಭಿಯಾನವೇ ನಡೆಸುತ್ತಿದ್ದಾರೆ.
ಅಭಿಮಾನಿಗಳ ಈ ಆಸೆ ಹಾಗೂ ಸುದೀರ್ಘ ಕಾಯುವಿಕೆಗೆ ಇದೀಗ ರವಿಚಂದ್ರನ್ ಅವರ ಕಿರಿಯ ಪುತ್ರ, ನಟ ವಿಕ್ರಮ್ ರವಿಚಂದ್ರನ್ ಭರವಸೆಯ ಗುಡ್ ನ್ಯೂಸ್ ನೀಡಿದ್ದಾರೆ.
ʻಶಾಂತಿ ಕ್ರಾಂತಿʼ ರೀ-ರಿಲೀಸ್ ಕುರಿತು ಮಾತನಾಡಿರುವ ವಿಕ್ರಮ್ ರವಿಚಂದ್ರನ್, ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಅಗಬೇಕು ಅಂತ ಡ್ಯಾಡಿಯನ್ನ ತುಂಬಾ ಟ್ಯಾಗ್ ಮಾಡಿದ್ದಾರೆ. ಗುಡ್ನ್ಯೂಸ್ ಏನು ಏನೆಂದರೆ, ಇವತ್ತು ನಾನು ಮತ್ತು ಡ್ಯಾಡಿ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ಮಾತುಕತೆ ನಡೀತಾ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
ಇನ್ನೂ ಈ ಸಿನಿಮಾ ರೀ-ರಿಲೀಸ್ ಆಗಬೇಕು ಅನ್ನೋದು ಕೇವಲ ಅಭಿಮಾನಿಗಳ ಆಸೆಯಷ್ಟೇ ಅಲ್ಲ, ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ದೊಡ್ಡ ಕನಸಾಗಿತ್ತಂತೆ. ಈ ಬಗ್ಗೆ ಮಾತನಾಡಿದ ವಿಕ್ರಮ್, ನನಗಿಂತ ನನ್ನ ಅಣ್ಣ ಮನೋರಂಜನ್ ಈ ಸಿನಿಮಾವನ್ನ ರೀ-ರಿಲೀಸ್ ಮಾಡಬೇಕು ಅಂತ ತುಂಬಾ ಆಸೆ ಪಟ್ಟರು. ನಾವು ನಮ್ಮ ಆಸ್ತಿ ಅಂತ ಹೇಳೋದು, ಸಿನಿಮಾ ಮತ್ತು ಜನರ ಪ್ರೀತಿ. ಡ್ಯಾಡಿ ನಮಗೆ ಹೇಳಿದ್ದು ಏನು ಅಂತಂದರೆ, ಇಷ್ಟೊಂದು ಜನ ಆಸೆ ಪಡ್ತಾ ಇದ್ದಾರೆ, ನೋಡಿ ಏನ್ ಮಾಡ್ತೀಯ ಅಂದ್ರು. ನನಗೆ ಗ್ರೀನ್ ಸಿಗ್ನಲ್ ಬಂದಿದೆ. ಅದರ ಬಗ್ಗೆ ಈಗಷ್ಟೇ ಶುರುವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ʻಶಾಂತಿ ಕ್ರಾಂತಿʼ ಸಿನಿಮಾದ ವಿಶೇಷತೆಗಳ ಕುರಿತು ಮಾತನಾಡಿದ ವಿಕ್ರಮ್ ರವಿಚಂದ್ರನ್, “ಒಂದು ಕಾಕತಾಳೀಯವೆಂದರೆ ಈ ಸಿನಿಮಾ ರಿಲೀಸ್ ಆಗಿದ್ದು, ಸೆಪ್ಟೆಂಬರ್ 19, 1991ರಂದು. ಸಿನಿಮಾ ಬಗ್ಗೆ ತುಂಬಾ ವಿಷಯ ಆಡಿಯನ್ಸ್ ಮಾತನಾಡ್ತಿದ್ದಾರೆ. ಹತ್ತು ಕೋಟಿ ಸಿನಿಮಾ ಅಂತಿದ್ದಾರೆ. ಆದರೆ, ಸಿನಿಮಾದ ಬಜೆಟ್ ಅದಕ್ಕಿಂತ ಜಾಸ್ತಿ ಅನ್ನೋದು ಅವರಿಗೆ ಗೊತ್ತಿಲ್ಲ.
ಕ್ಲೈಮ್ಯಾಕ್ಸ್ ಶೂಟಿಂಗ್, ಸ್ಟಾರ್ ನಟರು.. ನಾನು ಇದನ್ನ ಅವರ ಮಗನಾಗಿ ಮಾತನಾಡ್ತಿಲ್ಲ. ಅವರ ಮಗನಾಗಿರೋದಕ್ಕೆ ಹೆಮ್ಮೆ ಇದೆ. ಅವರ ಮಗ ಅನ್ನೋದಕ್ಕಿಂತ ಹೆಚ್ಚಾಗಿ ನಾನು ಅವರಿಗೆ ಬಿಗ್ ಫ್ಯಾನ್. ಜನರ ಒತ್ತಾಯದ ಮೇರೆಗೆ, ಎಲ್ಲವೂ ಸರಿಯಾಗಿ ಆದರೆ, ರೀ-ರಿಲೀಸ್ ಆಗುತ್ತೆ” ಎಂದು ಭರವಸೆ ನೀಡಿದ್ದಾರೆ.