ತಿರುವನಂತಪುರ: ದಿ ಕೇರಳ ಸ್ಟೋರಿ-2 ಚಿತ್ರ ಬಿಡುಗಡೆಗೆ 15 ದಿನಗಳ ತಡೆ ನೀಡಿದ್ದ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿತು.
ನ್ಯಾಯಮೂರ್ತಿಗಳಾದ ಎಸ್.ಎ. ಧರ್ಮಾಧಿಕಾರಿ ಹಾಗೂ ಪಿ.ವಿ. ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠ, ನ್ಯಾಯಮೂರ್ತಿ ಬೇಚು ಕುರಿಯನ್ ಥೋಮಸ್ ಅವರು ನೀಡಿದ್ದ ಆದೇಶಕ್ಕೆ ತಡೆ ನೀಡಿತು.
ವಿಭಾಗೀಯ ಪೀಠ ನೀಡಿದ್ದ ಆದೇಶದ ವಿರುದ್ಧ ಚಿತ್ರ ನಿರ್ಮಾಪಕ ವಿಪುಲ್ ಅಮೃತಲ್ ಶಾ ಗುರುವಾರ ಮೇಲ್ಮನವಿ ಸಲ್ಲಿಸಿದ್ದರು. ಫೆ.27 ರಂದು ಸಿನಿಮಾ ಬಿಡುಗಡೆ ಇರುವುದರಿಂದ ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಗುರುವಾರ ಸಂಜೆ ವಿಚಾರಣೆ ಆರಂಭಿಸಿದ ವಿಭಾಗೀಯ ಪೀಠ ಸುಮಾರು 2 ಗಂಟೆ ವಿಸ್ತೃತ ವಿಚಾರಣೆ ನಡೆಸಿ, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಈ ಚಿತ್ರವು ಕೇರಳ ರಾಜ್ಯಕ್ಕೆ ಅಥವಾ ಯಾವುದೇ ಸಮುದಾಯಕ್ಕೆ ಹಾನಿ ಮಾಡುವುದಿಲ್ಲ ಅಥವಾ ಅವಹೇಳನ ಮಾಡುವುದಿಲ್ಲ ಎಂದು ಶಾ ತಮ್ಮ ಮನವಿಯಲ್ಲಿ ಹೇಳಿದ್ದರು.
ಸಾಮಾಜಿಕ ಅನಿಷ್ಟವನ್ನು ಮಾತ್ರ ಚಿತ್ರಿಸಲಾಗಿದೆ. ಬಿಡುಗಡೆಗೆ ವಿಳಂಬವಾದಲ್ಲಿ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತದೆ. ಭಾರತದಾದ್ಯಂತ 1,500 ಮತ್ತು ವಿದೇಶಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಒಂದು ತಡೆಯು ನಿರ್ಮಾಪಕರನ್ನು "ಆರ್ಥಿಕವಾಗಿ ಮುಗಿಸುತ್ತದೆ" ಎಂದು ಶಾ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.