ಮುಂಬಯಿ: ಬಾಲಿವುಡ್ನ ಹಿರಿಯ ನಟಿ ಮಂದಾಕಿನಿ ತಮ್ಮ ವೃತ್ತಿಜೀವನದ ಅತಿದೊಡ್ಡ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿದ್ದಾರೆ. ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ವೈರಲ್ ಫೋಟೊ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.
1990ರ ದಶಕದಲ್ಲಿ ಸೆರೆಯಾಗಿದ್ದ ಈ ಫೋಟೋ ಬಾಲಿವುಡ್ ಲೋಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ನಟಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ತಮಗೆ ದಾವೂದ್ ಇಬ್ರಾಹಿಂ ಯಾವುದೇ ವೈಯಕ್ತಿಕ ಆಹ್ವಾನ ನೀಡಿರಲಿಲ್ಲ, ಬದಲಿಗೆ ತಾವು ಶೋಗೆ ದುಬೈಗೆ ತೆರಳಿದ್ದಾಗಿ ಮಂದಾಕಿನಿ ಹೇಳಿದ್ದಾರೆ.
ಖಾಸಗಿ ಮಾಧ್ಯವಮೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ ಮಂದಾಕಿನಿ, ಜನರು ಏನೆಲ್ಲಾ ಮಾತನಾಡಿಕೊಳ್ಳುತ್ತಾರೆ ಅಥವಾ ಬರೆಯುತ್ತಾರೆ ಎಂಬುದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಒಬ್ಬ ಕಲಾವಿದೆಯಾಗಿ ನಾವು ಸಾರ್ವಜನಿಕವಾಗಿ ಅನೇಕ ಜನರನ್ನು ಭೇಟಿಯಾಗಬೇಕಾಗುತ್ತದೆ ಎಂದಿದ್ದಾರೆ.
ನಾನು ದುಬೈಗೆ ಕೇವಲ ಒಂದು ಕಾರ್ಯಕ್ರಮಕ್ಕಾಗಿ ಹೋಗಿದ್ದೆ ಹೊರತು, ದಾವೂದ್ ಇಬ್ರಾಹಿಂ ನನ್ನನ್ನು ವಿಶೇಷವಾಗಿ ಆಹ್ವಾನಿಸಿರಲಿಲ್ಲ ಎಂದು ಆ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ದಾವೂದ್ ಜೊತೆಗಿನ ಆ ಫೋಟೋ ವೈರಲ್ ಆದ ಬಳಿಕ ಮಾಧ್ಯಮಗಳಲ್ಲಿ ಮತ್ತು ಜನರ ನಡುವೆ ದೊಡ್ಡ ಮಟ್ಟದ ಗಾಸಿಪ್ಗಳು ಹಬ್ಬಿದ್ದವು. ಇದು ತನ್ನ ಚಿತ್ರರಂಗದ ವೃತ್ತಿಜೀವನದ ಮೇಲೆ ತೀವ್ರ ಪರಿಣಾಮ ಬೀರಿತು ಎಂದು ಮಂದಾಕಿನಿ ಬೇಸರ ವ್ಯಕ್ತಪಡಿಸಿದ್ದಾರೆ.
ಆ ವಿವಾದದಿಂದ ನನ್ನ ಸಿನಿಮಾರಂಗದ ಹಾದಿಗೆ ಸಾಕಷ್ಟು ಹಾನಿಯಾಯಿತು. ಅಂತಹ ಸಂದರ್ಭಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ವದಂತಿಗಳನ್ನು ಎದುರಿಸಲು ಒಂದು ಸರಿಯಾದ ಮ್ಯಾನೇಜ್ಮೆಂಟ್ ತಂಡವಿರಬೇಕು ಎಂಬುದು ನನಗೆ ತಡವಾಗಿ ಅರಿವಾಯಿತು. ನಾನು ಆ ಸಮಯದಲ್ಲಿ ಎಲ್ಲೆಡೆ ಆ ವದಂತಿಗಳನ್ನು ನಿರಾಕರಿಸುತ್ತಲೇ ಇದ್ದೆ, ಎಂದು ಅವರು ನೆನಪಿಸಿಕೊಂಡಿದ್ದಾರೆ.
80ರ ದಶಕದಲ್ಲಿ ಬಾಲಿವುಡ್ನಲ್ಲಿ ಹರಿದಾಡುತ್ತಿದ್ದ ಭೂಗತ ಲೋಕದ ಪ್ರಭಾವ ಅಥವಾ ಹಣಕಾಸಿನ ನೆರವಿನ ಬಗ್ಗೆ ತಮಗೆ ಯಾವುದೇ ಸುಳಿವಿರಲಿಲ್ಲ ಎಂದ ನಟಿ, ನಂತರ ಬಂದ ಸಿನಿಮಾಗಳನ್ನು ನೋಡಿಯೇ ನನಗೆ ಈ ವಿಷಯಗಳ ಅರಿವಾಯಿತು ಎಂದಿದ್ದಾರೆ.
1985ರಲ್ಲಿ ರಾಜ್ ಕಪೂರ್ ನಿರ್ದೇಶನದ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಮಂದಾಕಿನಿ, ಆ ಕಾಲದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.