ವಾಲಿ ವಧೆ ಪ್ರಸಂಗ (ಸಾಂಕೇತಿಕ ಚಿತ್ರ) 
ಅಂಕಣಗಳು

ರಾಮ ವಿರೋಧ ನಿನ್ನೆ ಮೊನ್ನಿನದಲ್ಲ, ಆದರೂ ಆದರ್ಶ ರಾಮರ ಆರಾಧನೆಗೆ ಕೊರತೆ ಇಲ್ಲ!

ಡಾ.ಪಾವಗಡ ಪ್ರಕಾಶ್ ರಾವ್ ಅವರ ರಾಮಾಯಣ ಅವಲೋಕನ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ...

ಕಳೆದ ಸಂಚಿಕೆಯಲ್ಲಿ ಹೇಳಿದಂತೆ ರಾಮನ, ರಾಮಾಯಣದ ಬಗ್ಗೆ ಜನಸಾಮಾನ್ಯರಿಗೆ ಭಕ್ತಿ ಇದ್ದರೆ, ರಸಾನುಭವಿಗಳು ರಾಮಾಯಣದ ಪಾತ್ರಗಳನ್ನು ಆಸ್ವಾದಿಸುತ್ತಾರೆ ಹಾಗೂ ರಾಮರನ್ನು ಪ್ರಸ್ನಿಸುವವರ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪೈಕಿಯ ಅನೇಕರಿಗೆ ರಾವಣ-ದುರ್ಯೋಧನರೇ ನಾಯಕರು. ಶಕುನಿ - ಮಾರೀಚರೇ ಮಾರ್ಗದರ್ಶಕರು . ಕುಂಭಕರ್ಣ - ದುಶ್ಶಾಸನರೇ ಶಾಸಕರು . ಇವರಿಗೆ ರಾಮ ಕಡುವೈರಿ . ಕೃಷ್ಣ ಕುಟಿಲ ರಾಜಕಾರಿಣಿ. ಸೀತೆ ವ್ಯಭಿಚಾರಿಣಿ .ಲಕ್ಷ್ಮಣ ಸೀತಾಸಕ್ತ. ವಾಲಿ ರಸಿಕ ! ರಾಮಾಯಣ ಅನ್ಯಾಯ - ಅಧರ್ಮ - ದಬ್ಬಾಳಿಕೆಗಳ ಹೆಬ್ಬೊತ್ತಗೆ. ಗೀತೆ ಅಸಮಾನತೆ - ಕ್ರೌರ್ಯ - ಯುದ್ಧೋನ್ಮಾದದ ರಾಸಭ ಘರ್ಜನೆ.  ಅದರ ಮಾದರಿಗಳನ್ನು ನೋಡೋಣವೆ ?  
ಕೈಕೆಯ ವಿವಾಹದಲ್ಲಿಯೇ ದಶರಥ ಕೇಕೆಯ ರಾಜನಿಗೆ ಮಾತು ಕೊಟ್ಟಿದ್ದ ; " ನಿನ್ನ ಮಗಳಲ್ಲಿ ಹುಟ್ಟುವ ಮಗನಿಗೇ ರಾಜ್ಯ ಕೊಡುತ್ತೇನೆ " ಎಂದು. ಆದರೆ ಭರತನಿಲ್ಲದಾಗ ದಶರಥ-ರಾಮರು ಕುಯುಕ್ತಿಯಿಂದ ಪಟ್ಟಕ್ಕೆ ಪ್ರಯತ್ನ ಪಟ್ಟರು. ಮಂಥರೆ ಅಡ್ಡಿಯಾಗಿ, ಕೈಕೆ ಅನುಮೋದಿಸಿದಳು, ಸಂಚು ಫಲಿಸದಿದ್ದಾಗ ದಶರಥ ಮೂರ್ಛಿತನಾದ. ರಾಮ ಪಿತೃವಾಕ್ಯ ಪರಿಪಾಲಕನೆಂಬ ಸೋಗು ಹಾಕಿ ಕಾಡಿಗೆ ಹೋದ. ಜನಪ್ರೀತಿ ರಾಮನ ಪರವಾಗಿದ್ದರಿಂದ ಭರತನಿಗೆ ದಾರಿ ಕಾಣದೇ ಸಿಂಹಾಸನದಿಂದ ದೂರ ಉಳಿದ. ಶೂರ್ಪನಖೆ ಪ್ರೀತಿ ನಿವೇದಿಸಿದ್ದಕ್ಕೆ ರಾಮರು ಲಕ್ಷ್ಮಣನಿಗೆ ಹೇಳಿ ಅವಳ ಕಿವಿ, ಮೂಗುಗಳನ್ನು ಕೊಯ್ಸುವುದೇ ? ಆದ್ದರಿಂದಲೇ ರಾವಣ ಸೀತೆಯನ್ನು ಕದ್ದದ್ದು. ರಾವಣ ಮುಯ್ಯಿಗೆ ಮುಯ್ಯಾಗಿ ಸೀತೆಯ ಕಿವಿ - ಮೂಗು ಕತ್ತರಿಸದೇ ಕೇವಲ ಹೊತ್ತೊಯ್ದ; ಮದುವೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದನೇ ವಿನಃ ಮುಟ್ಟಲೂ ಇಲ್ಲ . ಎಲ್ಲಿಯ ರಾವಣ ; ಎಲ್ಲಿಯ ರಾಮ?  
ವಾಲಿ ಸುಗ್ರೀವರ ಮಧ್ಯೆ ಮೂಗು ಹಾಕಲು ರಾಮನಿಗೇನು ಅಧಿಕಾರ ? ವಾಲಿ-ಸುಗ್ರೀವರದ್ದು ಕುಟುಂಬ ಕಲಹ. ಅವರೇ ಪರಿಹರಿಸಿಕೊಳ್ಳಬೇಕು. ತನಗೆ ಸೀತಾನ್ವೇಷಣೆಗೆ ಸುಗ್ರೀವನ ನೆರವು ಬೇಕಿತ್ತು; ಅಣ್ಣನ ಪತ್ನಿಯನ್ನು ಅನುಭವಿಸಿದ ಅಧರ್ಮಿಯ ಕೈ ಕುಲುಕಿದ. ಮರದ ಮರೆಯಲ್ಲಿ ನಿಂತು ಬಾಣ ಬಿಟ್ಟ. ಯುಗ-ಯುಗಗಳು ಕಳೆದರೂ ಜನನಿಂದನೆಗೆ ಗುರಿಯಾದ. ರಾಮರ ಬಗ್ಗೆ ಪತ್ನಿ ಕೊಟ್ಟ ಸೂಚನೆಯನ್ನೂ ಲೆಕ್ಕಿಸಲಿಲ್ಲ; ಧರ್ಮಾತ್ಮ ರಾಮ ಏಕೆ ವಿನಾಕಾರಣ ಘಾತಿಸುವನು ಎಂದು ನಂಬಿದ್ದ.  ನಂಬಿದ್ದರಿಂದಲೇ ವಾಲಿ ಸತ್ತ. ಅದಕ್ಕೇ ವಾಲಿ ಬಾಯಿಗೆ ಬಂದಂತೆ ಬೈದರೂ ರಾಮ ತುಟಿಪಿಟಿಕ್ಕೆನ್ನದೇ ವಾಲಿಯ ಮಾತಿನ ಚಾಟಿ ಏಟನ್ನು ಸಹಿಸಿಕೊಳ್ಳಬೇಕಾಯ್ತು.
ವಿಭೀಷಣನೋ ಅಣ್ಣನಿಗೆ ಕೈ ಕೊಟ್ಟ ತಮ್ಮ. ಪಕ್ಷಾಂತರ ಮಾಡಿ ಕೆಟ್ಟ ಜಾಡಿನ ಉದ್ಘಾಟಕನಾದ. ರಾವಣನನ್ನು ಎದುರಿಸಿ ಸಿಂಹಾಸನ ಹತ್ತುವ ಯೋಗತ್ಯೆ, ಬಲ, ಕಾನೂನಿನ ಮಾನ್ಯತೆ ಇಲ್ಲ. ತನ್ನ ದುರಾಶೆಯನ್ನು ಈಡೇರಿಸಿಕೊಳ್ಳಲು ರಾಮರ ಹತ್ತಿರಕ್ಕೆ ಹೋದ. ಮೃದು ಹೃದಯದ, ರಾವಣ ಹೋದರೆ ಹೋಗಲೆಂದು ಅಲಕ್ಷಿಸಿದ, ಇನ್ನು ರಾಮ ಬಿಟ್ಟಾನೆಯೇ? ಈ ವಿಭೀಷಣನನ್ನು ಸೇರಿಸಿಕೊಳ್ಳುವುದೇ ಬೇಡವೆಂದು ಯಾರೆಲ್ಲ ವಿರೋಧಿಸಿದರೂ , ಯಾರ ಮಾತಿಗೂ ಸೊಪ್ಪು ಹಾಕದೇ ಸ್ವಾಗತಿಸಿಯೇ ಬಿಟ್ಟ. ಯುದ್ಧ ಮಾಡದೇ, ರಾವಣನನ್ನು ಸಾಯಿಸದೇ, ವಿಭೀಷಣನಿಗೆ ಲಂಕೆಯ ಪಟ್ಟ ಕಟ್ಟಿದ. 
ಸ್ತ್ರೀಶೋಷಕ - ಶೂದ್ರ ಧ್ವಂಸಕ ರಾಮರ ಎರಡು ಚಿತ್ರಗಳನ್ನು ಕೊಟ್ಟು ಸದ್ಯಕ್ಕೆ ನಮ್ಮ ವಾದವನ್ನು ನಿಲ್ಲಿಸುವ: 
ಅಧರ್ಮ ಪಾರಾಯಣ ರಾಮನ ಕುಕೃತ್ಯಗಳು , ಅನ್ಯಾಯ ಪ್ರಸಂಗಗಳು ಒಂದೇ ಎರಡೇ? ಅಡವಿಗೆ ಹೊರಟ ಗಂಡನನ್ನು ಬಿಟ್ಟಿರದೇ, ಅರಣ್ಯ ಕಷ್ಟಗಳನ್ನೆಲ್ಲ ತುಟಿ ಬಿಗಿದು ಅನುಭವಿಸಿದಳು. ಕೊನೆಗೆ ಆ ರಾವಣ ತನ್ನನ್ನು ಒಯ್ದಾಗಲೂ, ಎಂದಾದರೂ ದುರ್ಬಲಳಾದಳೇ ? ರಾವಣನನ್ನು ಕಣ್ಣೆತ್ತಿ ಕಂಡಳೇ ? ಅಣು ಮಾತ್ರವಾದರೂ, ಮನದಲ್ಲಾದರೂ ಆ ಆಕರ್ಷಣೆಗೆ ಸ್ಪಂದಿಸಿದಳೇ ?ಎಂತಹ ಪತಿವ್ರತಾ ನಾರಿ!  ರಾವಣನನ್ನೇನೋ ಈ ರಾಮ ಎದುರಿಸಿದ, ಹೇಗೆ ಯುದ್ಧ ಮುಗಿಸುವುದೆಂದು ಚಿಂತಾಕ್ರಾಂತನಾದನಲ್ಲ ? ಏನೋ ಇಂದ್ರ ರಥ ಕಳಿಸಿದ ; ಗುರುಗಳು ಬಂದರು ; ಅಗಸ್ತ್ಯರು ಆದಿತ್ಯ ಹೃದಯವನ್ನು ಹೇಳಿಕೊಟ್ಟರು ; ಮಾತಲಿ ಮಾರ್ಗದರ್ಶನ ಮಾಡಿದ ; ಹಾಗೂ - ಹೀಗೂ ರಾವಣನ ಎದೆಗೆ ಈ ರಾಮ ಬಾಣ ಬಿಟ್ಟ !! ಬ್ರಮ್ಹಾಸ್ತ್ರ ಅವನನ್ನು ಸಂಹರಿಸಿತು. ರಾಮ ಮಾಡಿದ್ದು ಅಷ್ಟರಲ್ಲೇ ಇದೆ ಬಿಡಿ ....ಸೀತೆ ಬಂದಾಗ ರಾಮನಡೆ ಎಂತು ? ಯಾವ ಸಭ್ಯ ಮನುಷ್ಯ ರಾಮನನ್ನು ಬೆಂಬಲಿಸಿಯಾನು ? ನೊಂದವಳು ಸೀತೆ , ಅವಳನ್ನು ರಕ್ಷಿಸದವ ರಾಮ . ಕೊನೆಗೆ ಅವಳು ಬಂದರೆ ಅವಳನ್ನು ಹಿಗ್ಗಾ-ಮುಗ್ಗಾ ಮೂದಲಿಸುವುದೇ ? ತನ್ನನ್ನು ಬಿಟ್ಟು ಹೋಗೆಂದು ವಿಚ್ಛೇದನ ಘೋಷಿಸುವುದೇ ? ಕೊನೆಗವಳು ರಾಮನನ್ನು ಧಿಕ್ಕರಿಸಿ ಅಗ್ನಿ ಪ್ರವೇಶ ಮಾಡುವೆನೆಂದಾಗ , ಲಕ್ಷ್ಮಣನಿಗೆ ಬೆಂಕಿ ಹಚ್ಚಲು ಆಙ್ಞೆ ಮಾಡುವುದೇ ? ಯಾವ ಹೆಣ್ಣು ಈ ಅವಮಾನವನ್ನು ಸಹಿಸಿಯಾಳು ? ವಿಶ್ವ ಮಹಿಳೆಯರ ದಿನಾಚರಣೆಯಂದು ಎಲ್ಲ ಸ್ತ್ರೀಯರೂ ಈ ರಾಮನನ್ನು ಉಗ್ರವಾಗಿ ಧಿಕ್ಕರಿಸಬೇಕಾದದ್ದೇ!
ಶೂದ್ರ ತಪಸ್ವಿಯ ದಾರುಣ ಹತ್ಯೆ : ರಾಷ್ಟ್ರ ಕವಿ ಕುವೆಂಪುರವರ "ಶೂದ್ರ ತಪಸ್ವಿ” ಓದದವರಾರು? ರಾಮರ ಈ ಶೂದ್ರ ವಿರೊಧೀ ನಿಲುವನ್ನು ಅವರು ಬಣ್ಣಿಸಿದರಾಗಿ ನಮಗೆ ಈ ರಾಮರ ಗುಪ್ತ ದುರ್ಗುಣ ಕಂಡಿತು . ಹೀಗಾಗಿ ನಾವು ಅವರಿಗೆ ಋಣಿ . ಶಂಬೂಕನನ್ನು ಸಂಹರಿಸಲು ಬಿಟ್ಟ ಬಾಣ , ಹಿಂದೆಂದೂ ರಾಮಾದೇಶವನ್ನು ಮೀರದ ಆ ರಾಮಾಸ್ತ್ರ , ಶಂಬೂಕನನ್ನು ಮುಟ್ಟಲೂ ಅಂಜಿ , ಹಿಂದಿರುಗಿ ರಾಮರ ಬಳಿಗೇ ಬಂದು ನಿಂತಿತು. ಇಷ್ಟಕ್ಕೂ ಶಂಬೂಕ ಮಾಡಿದ ತಪ್ಪೇನು ? ಸ್ವರ್ಗ ಬಯಸಿ ತಪಸ್ಸಿಗೆ ಕುಳಿತಿದ್ದೇ ? ಶೂದ್ರ ಆ ರೀತಿ ಸ್ವಾರ್ಥಿಯಾಗಬಾರದಿತ್ತು ಎಂಬುವುದಾದರೆ ತ್ರಿಶಂಕು ಮಾಡಿದ್ದೇನು ? ಈ ರಾಮರ ಗುರುಗಳೇ ಅವನನ್ನು ಸ್ವರ್ಗಕ್ಕೆ ಕಳಿಸಿದರಲ್ಲ ! ಅದು ಸರಿಯಾದರೆ ಶಂಬೂಕ ಬಯಸಿದ್ದರಲ್ಲಿ ತಪ್ಪೇನಿದೆ ? ಶೂದ್ರನೊಬ್ಬ ತಪಸ್ಸು ಮಾಡಕೂಡದೆಂಬುದು ರಾಮಾಭಿಪ್ರಾಯವಾದರೆ, ಇದೆಂತಹ ಜಾತಿ ವಿರೋಧೀ ನೀತಿ ? ಕ್ಷತ್ರಿಯರಿಗೊಂದು ಕಾನೂನು , ಶೂದ್ರರಿಗೊಂದು ನೀತಿಯೆ ? ಇದು ರಾಮ ರಾಜ್ಯವೇ ? ಓದುಗರೆ,  ಮೇಲ್ನೋಟಕ್ಕೇ ಇವರ ಮಾತುಗಳು ಎಲ್ಲೋ ನಿಜವೇನೋ ಎಂದೆನ್ನಿಸಿಬಿಡುತ್ತದಲ್ಲವೆ ? ಹಾಗಾದರೆ ಭಾರತದುದ್ದಗಲಕ್ಕೂ ಇರುವ ರಾಮ ಭಕ್ತರು ಅಙ್ಞಾನಿಗಳೆ ? ರಾಮ ಕಾವ್ಯಗಳು " ಮಿಥ್ಯಾ - ಮಾಯಾ ಮೋಹಾವೇಶವೆ ? ರಾಮ ವಿರೋಧ ನಿನ್ನೆ ಮೊನ್ನಿನದಲ್ಲ. ಎಂದು ವಾಲಿ ತನ್ನ ವಿರೋಧವನ್ನು ದಾಖಲಿಸಿದನೋ ಅಂದಿನಿಂದ ಈ ದೋಷಾರೋಪಣೆ ಅವ್ಯಾಹತವಾಗಿ ಆಗಾಗ್ಗೆ ಕಾಲಕಾಲಕ್ಕೆ ವಿಜೃಂಭಿಸುತ್ತಲೇ ಇದೆ. ಉತ್ತರ ಭಾರತದಲ್ಲಿನ ರಾವಣ ಲೀಲಾಗಳು ನರ್ತಿಸುತ್ತಲೇ ಇವೆ . ಸಿಂಹಳದಲ್ಲಿ ರಾವಣನ ಗುಡಿಯಲ್ಲೂ ಘಂಟೆ ಬಾರಿಸುತ್ತದೆ . ತೆಲುಗಿನಲ್ಲಿ " ರಾಮಾಯಣ ವಿಷ ವೃಕ್ಷಮು ” ವಿಷದ ಹಣ್ಣುಗಳನ್ನು ತುಂಬಿಕೊಂಡಿದೆ . ನಾವೇನು ಕಡಿಮೆಯೆಂದು ಮೈಸೂರಿನ ಪ್ರಾಧ್ಯಾಪಕರುಗಳು ದಶಮಾನಗಳಿಂದ ತಮ್ಮ ಸೇವೆಯನ್ನೂ ಸಲ್ಲಿಸುತ್ತಲೇ ಬಂದಿದ್ದಾರೆ. ( "ವಾಲ್ಮೀಕಿ ತೂಕಡಿಸಿದಾಗ”, " ಸೀತಾಯಣ",) 
ಹೌದು. ಇವೆಲ್ಲ ಎಷ್ಟು ಸತ್ಯವೋ, ರಾಮ ನವಮಿಯ ಹತ್ತೂ ದಿನಗಳು ಅಖಂಡ ರಾಮಭಜನೆ ನಡೆಯುವುದು, ಕೀರ್ತನೆ, ಆರಾಧನೆಗಳು ನಡೆಯುವುದು, ಇಡಿ ಭಾರತವೇ ಹಬ್ಬ ಮಾಡಿ ಸುಖಿಸುವುದು ಅಷ್ಟೇ ಪರಮಸತ್ಯ. ಆದರೆ ರಾಮರನ್ನು ಪ್ರಶ್ನಿಸುವವರು ವಾಲ್ಮೀಕಿ-ವ್ಯಾಸರಿಗಿನ್ನ ; ಶಂಕರ-ರಾಮಾನುಜ-ಮಧ್ವಾಚಾರ್ಯರಿಗಿನ್ನ ; ಕಾಳಿದಾಸ-ಭವಭೂತಿಗಳಿಗಿನ್ನ ; ಬೇಂದ್ರೆ - ಕುವೆಂಪುಗಳಿಗಿನ್ನ ; ಪುರಂದರ - ಕನಕದಾಸರುಗಳಿಗಿನ್ನ ; ಕಬೀರ - ಸೂರದಾಸರಿಗಿನ್ನ ; ತ್ಯಾಗರಾಜರು-ಶಾಮಾಶಾಸ್ತ್ರಿಗಳು-ದೀಕ್ಷಿತರಿಗಿನ್ನ ; ಗಾಂಧೀಜಿ-ವಿನೋಬಾ- ಟಿಳಕರಿಗಿನ್ನ ; ಗೊಂದಾವಳಿಯಬ್ರಮ್ಹಚೈತನ್ಯ-ಬೆಳಧಡಿಯಬ್ರಮ್ಹಾನಂದ ಗುರುಗಳಿಗಿನ್ನ ; ರಾಮಕೃಷ್ಣ-ವಿವೇಕಾನಂದರಿಗಿನ್ನ ; ರಾಜಾಜಿ-ರಜತ ಜಿಹ್ವೆಯ ಶ್ರೀನಿವಾಸ ಶಾಸ್ತ್ರಿಗಳಿಗಿನ್ನ ದೊಡ್ಡವರೇನು? ಇವರು ಈ ಎಲ್ಲ ಮಹಾಪುರುಷರಿಗಿನ್ನ ಹೆಚ್ಚು ಸಂವೇದನಾಶೀಲರೇನು ? ಅವರಾರಿಗೂ ಕಾಣಿಸದ ದೋಷಗಳು ಇವರಿಗೇ ಕಾಣುತ್ತಿದೆಯೇನು? 
ಮುಂದಿನ ಸಂಚಿಕೆಗೆ ನಿರೀಕ್ಷಿಸಿ: 'ಕವಿ ನಮನ, ವಾಲ್ಮೀಕಿಯಾದ ಪ್ರಾಚೇತಸ' 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT