ಕೊಲ್ಕತ್ತಾ: ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್ಗಳ ಗೆಲುವು ಸಾಧಿಸಿತು. ವಿಶ್ವಕಪ್ ಪಂದ್ಯಗಳಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನದ ವಿರುದ್ಧ ಭಾರತ ಯಾವತ್ತೂ ಸೋಲಲೇ ಇಲ್ಲ. ಪ್ರತೀ ಸಾರಿಯೂ ಭಾರತ ವಿರುದ್ಧ ಗೆಲುವು ಸಾಧಿಸಲು ಪಾಕಿಸ್ತಾನ ಹಪಾಹಪಿಸುತ್ತಿದ್ದರೂ, ಅವರ ಗೆಲುವಿನ ಕನಸು ನನಸಾಗಲು ಟೀಂ ಇಂಡಿಯಾ ಬಿಡಲೇ ಇಲ್ಲ.
ಅಂದ ಹಾಗೆ ಪಾಕಿಸ್ತಾನಕ್ಕೆ ಭಾರತ ವಿರುದ್ದ ಗೆಲ್ಲಲು ಸಾಧ್ಯವಾಗುವುದಿಲ್ಲ? ಯಾಕೆ ಎಂಬುದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ಶ್ರೀಲಂಕಾದ ಮಾಜಿನಾಯಕ ಕುಮಾರ ಸಂಗಕ್ಕಾರ ಕಾರಣವನ್ನು ನೀಡಿದ್ದಾರೆ.
ಟೀಂ ಇಂಡಿಯಾ ಯಾವುದೇ ದೊಡ್ಡ ಪಂದ್ಯವನ್ನು ಆಡುವಾಗ ಅದಕ್ಕೆ ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆ. ಆ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ಆ ಆಟಗಾರರ ಮೇಲೆ ಭರವಸೆಯನ್ನಿರಿಸಲಾಗುತ್ತದೆ. ಆ ಆಟಗಾರನ ಸಾಮರ್ಥ್ಯ, ಆತ್ಮವಿಶ್ವಾಸವನ್ನೆಲ್ಲ ಪರಿಗಣಿಸಿಯೇ ತಂಡದಲ್ಲಿ ಆತನನ್ನು ನೇಮಕ ಮಾಡಲಾಗುತ್ತದೆ.
ಆದರೆ ಪಾಕಿಸ್ತಾನದ ರೀತಿ ಹೀಗಿರುವುದಿಲ್ಲ. ಅವರು ಆಟವಾಡಲು ಸರಿಯಾದ ವ್ಯವಸ್ಥೆಯನ್ನು ರೂಪಿಸಿಕೊಂಡು ಬಂದಿರುವುದಿಲ್ಲ. ತಂಡಕ್ಕೆ ಆಯ್ಕೆಯಾಗುವ ಹೊತ್ತಲ್ಲೇ ಅವರು ಒಂದಷ್ಟು ಸಂಶಯ, ವಿವಾದಗಳನ್ನು ಮೈ ಮೇಲೆ ಹೊದ್ದುಕೊಂಡಿರುತ್ತಾರೆ. ಅವರ ತಂಡದ ಒಳಗೂ ಹೊರಗೂ ಸರಿಯಾದ ಹೊಂದಾಣಿಕೆಯಿರುವುದಿಲ್ಲ. ಆಟಗಾರರು ಮಾತ್ರ ಅಲ್ಲ ಮ್ಯಾನೇಜ್ಮೆಂಟ್ನಲ್ಲೂ ಇದೇ ರೀತಿಯ ಸಮಸ್ಯೆಯಿರುತ್ತದೆ.
ಆದಾಗ್ಯೂ, ಬದ್ಧ ವೈರಿಗಳ ವಿರುದ್ಧ ಹೋರಾಡುವಾಗ ಭಾರತ ತಮ್ಮ ಭಾವನೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಆಟದ ಕಾರ್ಯತಂತ್ರ ರೂಪಿಸುತ್ತದೆ. ಪಾಕಿಸ್ತಾನದ ವಿರುದ್ಧ ಭಾರತ ಆಡುವಾಗ ಅಲ್ಲಿ ಹಿರಿಯ ಆಟಗಾರರಿಗೆ ಆದ್ಯತೆ ನೀಡಲಾಗುತ್ತದೆ. ಪಾಕಿಸ್ತಾನದಲ್ಲಿ ಹಿರಿಯ ಆಟಗಾರರು ಇದ್ದರೂ ಭಾರತ ತಂಡದಲ್ಲಿ ಪ್ರಬುದ್ಧತೆ ಇರುತ್ತದೆ. ಟೀಂ ಇಂಡಿಯಾ ಚೊಕ್ಕವಾದ ಗೇಮ್ ಪ್ಲಾನ್ನ್ನು ತಯಾರಿಸುವುದರಲ್ಲಿ ನಿಪುಣತೆಯನ್ನೂ ಹೊಂದಿರುತ್ತದೆ.
ಪಾಕಿಸ್ತಾನ ತಂಡಕ್ಕಿಂತ ಭಾರತ ಉತ್ತಮವಾಗಿ ಆಡಿದೆ. ಪಾಕಿಸ್ತಾನ ಆರಂಭಿಕ ದಾಂಡಿಗರು ಪಾಕಿಸ್ತಾನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ. ಪಿಚ್ ಟಫ್ ಆಗಿತ್ತು ನಿಜ, ಆದರೆ ಅವರು ಸಿಂಗಲ್ಸ್ ತೆಗೆದುಕೊಳ್ಳುವ ಶ್ರಮವನ್ನೂ ಮಾಡಲಿಲ್ಲ. ಶೊಹೈಬ್ ಮಲಿಕ್ ಮತ್ತು ಉಮರ್ ಅಕ್ಮಲ್ ಅವರು ಚೆನ್ನಾಗಿ ಆಡದೇ ಇರುತ್ತಿದ್ದರೆ ಪಾಕ್ ಸ್ಕೋರ್ ನೂರು ದಾಟುತ್ತಿರಲಿಲ್ಲ.
ಇಂಥಾ ಒತ್ತಡದ ಪಂದ್ಯಗಳಲ್ಲಿ ಭಾರತ ಹೆಚ್ಚು ಪರಿಶ್ರಮ ಪಡುತ್ತದೆ, ಪಾಕಿಸ್ತಾನ ಈ ರೀತಿ ಶ್ರಮವಹಿಸುವುದಿಲ್ಲ.