ಕ್ರಿಕೆಟ್

ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲರ್, ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಕುರಿತು ಸಚಿನ್ ಮೆಚ್ಚುಗೆ

Vishwanath S
ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ತಮ್ಮ ವಿಶಿಷ್ಠ ಬೌಲಿಂಗ್ ಮೂಲಕ ಮಿಂಚು ಹರಿಸುತ್ತಿರುವ ನಮ್ಮ ಕರ್ನಾಟಕದ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಗೆ ಭಾರತ ಮಹಿಳಾ ತಂಡ ಲಗ್ಗೆ ಇಟ್ಟಿದೆ. ಇನ್ನೇನು ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸೆಣೆಸಲಿದೆ. ಸದ್ಯ ಟೀಂ ಇಂಡಿಯಾ ಬಲಿಷ್ಠ ತಂಡವಾಗಿದ್ದು ರಾಜೇಶ್ವರಿ ಗಾಯಕ್ವಾಡ್ ಅವರು ಬೌಲಿಂಗ್ ವಿಭಾಗದಲ್ಲಿ ಮಾರಕ ದಾಳಿ ನಡೆಸುತ್ತಿದ್ದು ಪ್ರತಿಸ್ಪರ್ಧಿ ತಂಡಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಇಂತಹ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಸಚಿನ್ ತೆಂಡೂಲ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿರುವುದು ಪ್ರೋತ್ಸಾಹದಾಯಕವಾಗಿದೆ. 
ಸಚಿನ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ, ವಿಜಯಪುರ ಜಿಲ್ಲೆಯ ಸಣ್ಣ ಪಟ್ಟಣದ ಯುವತಿ ರಾಜೇಶ್ವರಿ ಗಾಯಕ್ವಾಡ್ ತುಂಬಾ ಪ್ರತಿಭಾನ್ವಿತೆ. ಅಂತೆ ಆಕೆಗೆ ಕ್ರೀಡೆಯನ್ನು ಪ್ರೋತ್ಸಾಹಿಸುವಂತಾ ತಂದೆ ಸಿಕ್ಕಿರುವುದು ನಿಜಕ್ಕೂ ಅದೃಷ್ಟ. ತಂದೆ ಶಿವಾನಂದ್ ಗಾಯಕ್ವಾಡ್ ಅವರ ಸ್ಫೂರ್ತಿ ಮತ್ತು ಪ್ರೋತ್ಸಾಹ ನಿಮ್ಮ ಶಕ್ತಿ. ಅಂತೆ ನೀವು ಹಲವು ಯುವಕರಿಗೆ ಮತ್ತು ಯುವತಿಯರಿಗೆ ಸ್ಪೂರ್ತಿದಾಯಕರಾಗುತ್ತೀರಿ ಎಂಬ ನಂಬಿಕೆ ನನಗಿದೆ. ಉತ್ತಮವಾಗಿ ಆಡುತ್ತಿದ್ದಿರೀ ಮುಂದುವರೆಸಿ ನಿಮಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ. 
ವಿಜಯಪುರದ ಈ ಯುವತಿ ರಾಜೇಶ್ವರಿ ಜಾವಲಿನ್ ಥ್ರೋನಲ್ಲಿ ಅಗಾಧ ಪ್ರತಿಭೆ ಹೊಂದಿದ್ದರು. ಇದಕ್ಕೂ ಮುನ್ನ ಆಕೆಗೆ ಕ್ರಿಕೆಟ್ ಬಾಲ್ ಎಸೆದ ಅಭ್ಯಾಸವಿರಲಿಲ್ಲ. ಹೀಗಿದ್ದರು ಇಂದು ಆಕೆ ಮಾಡಿರುವ ಸಾಧನೆ ಅಪ್ರತಿಮ ಎಂದು ಸಚಿನ್ ಹೇಳಿದ್ದಾರೆ. 
ರಾಜೇಶ್ವರಿ ಗಾಯಕ್ವಾಡ್ ಅವರು 2014ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು. 29 ಏಕದಿನ ಪಂದ್ಯಗಳನ್ನು ಆಡಿರುವ ರಾಜೇಶ್ವರಿ ಅವರು 53 ವಿಕೆಟ್ ಗಳನ್ನು ಪಡೆದಿದ್ದಾರೆ. 
SCROLL FOR NEXT