ಕ್ರಿಕೆಟ್

ಬೆಂಗಳೂರಿನಂತೆ ಹೈದರಾಬಾದ್‌ನಲ್ಲಿ ಸಬ್-ಏರ್ ವ್ಯವಸ್ಥೆ ಅಳವಡಿಸಿದ್ದರೆ ಟಿ20 ಪಂದ್ಯ ರದ್ದಾಗುತ್ತಿರಲಿಲ್ಲ!

Vishwanath S
ಬೆಂಗಳೂರು: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಟಿ20 ಸರಣಿಯನ್ನು ಉಭಯ ತಂಡಗಳು ಹಂಚಿಕೊಂಡಿವೆ. 
ಇನ್ನು ಪಂದ್ಯ ರದ್ದಾಗಲು ಕಾರಣ ಬೆಂಗಳೂರಿನಂತೆ ಹೈದರಾಬಾದ್ ನಲ್ಲಿ ಸಬ್ ಏರ್ ವ್ಯವಸ್ಥೆ ಅಳವಡಿಸದೇ ಇರುವುದೇ ಮುಖ್ಯ ಕಾರಣವಾಗಿದೆ. ಬೆಂಗಳೂರಿನಲ್ಲಿ ಎಷ್ಟೇ ಮಳೆ ಬಂದರೂ, ಮಳೆ ನಿಂತ 20 ನಿಮಿಷಗಳಲ್ಲಿ ಆಟ ಆರಂಭಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನವಾದ ಸಬ್ ಏರ್ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಲವು ತಿಂಗಳುಗಳ ಹಿಂದೆಯೇ ಪೂರ್ಣಗೊಳಿಸಿತ್ತು. 
ದೇಶದ ಎಲ್ಲಾ ಪ್ರಮುಖ ಕ್ರೀಡಾಂಗಣಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸಬೇಕಿದೆ. ಕ್ರಿಕೆಟ್ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಹಣ ಖರ್ಚು ಮಾಡುವ ಬಿಸಿಸಿಐಗೆ ಕೆಲವೇ ಕೋಟಿಗಳ ವೆಚ್ಚವಾಗುವ ಸಬ್-ಏರ್ ಅವಳಡಿಸುವುದು ದೊಡ್ಡ ಸವಾಲೇನಲ್ಲ.
ಹೈದರಾಬಾದ್ ನಲ್ಲಿ ಮೊನ್ನೆ ಸುರಿದ ಬಾರಿ ಮಳೆಗೆ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿತ್ತು. ಇನ್ನು ನಿನ್ನೆ ಸರಿಯಾಗಿ ಬಿಸಿಲು ಬಾರದ ಕಾರಣ ಮೈದಾನ ಸಂಪೂರ್ಣವಾಗಿ ಒಣಗಿರಲಿಲ್ಲ. ಈ ವೇಳೆ ಮೈದಾನ ಒಣಗಿಸಲು ಕ್ರೀಡಾಂಗಣ ಸಿಬ್ಬಂದಿ ಫ್ಯಾನ್ ಗಳ ಬಳಕೆ ಮಾಡಿದ್ದರು ಎಲ್ಲರ ಗಮನ ಸೆಳೆಯಿತು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಯಾಯಿತು.
ಮಳೆಯಿಂದಾಗಿ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ ನಾಯಕರಾದ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಅಂಪೈರ್ ಗಳು ಹಾಗೂ ಮ್ಯಾಚ್ ರೆಫ್ರಿ ಒದ್ದೆ ಮೈದಾನದಲ್ಲಿ ಪಂದ್ಯ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಚರ್ಚಿಸಿ ಪಂದ್ಯ ರದ್ದುಗೊಳಿಸುವ ನಿರ್ಧಾರಕ್ಕೆ ಬಂದರು. 
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಸರಣಿಯನ್ನು ಹಂಚಿಕೊಂಡವು. ಮೊದಲ ಟಿ20 ಪಂದ್ಯದಲ್ಲಿ ಭಾರತ, 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿತ್ತು. ಹೀಗಾಗಿ ಹೈದರಾಬಾದ್ ನಲ್ಲಿನ ಮೂರನೇ ಪಂದ್ಯ ಹೆಚ್ಚು ಪ್ರಮುಖ್ಯತೆ ಪಡೆದಿತ್ತು. 
ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದೇ ಪಂದ್ಯ ರದ್ದಾಗಲು ಕಾರಣ. ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ಮೈದಾನವನ್ನು ಮುಚ್ಚಿಲ್ಲ. ಪಂದ್ಯ ಆರಂಭಕ್ಕೆ ಹಲವು ಗಂಟೆಗಳ ಮುಂಚೆಯೇ ಮಳೆ ನಿಂತರೂ ಕನಿಷ್ಠ ಪಕ್ಷ 5 ಓವರ್ ಗಳ ಆಟವನ್ನೂ ನಡೆಸಲು ಸಾಧ್ಯವಾಗದೆ ಇದ್ದಿದ್ದು ನೆರದಿದ್ದ 29,851 ಪ್ರೇಕ್ಷಕರಿಗೆ ಭಾರೀ ನಿರಾಸೆ ಉಂಟು ಮಾಡಿತು. 
SCROLL FOR NEXT