ಕರಾಚಿ: 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಗೆ ಬುಕ್ಕಿಗಳು ಹಿಂದೆ ಬಿದ್ದಿದ್ದಾರಂತೆ.
ದುಬೈನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಬುಕ್ಕಿಗಳು ಆಫರ್ ಮಾಡುತ್ತಿದ್ದಾರಂತೆ. ಆದರೆ ಇದನ್ನು ನಿರಾಕರಿಸಿರುವ ಸರ್ಫರಾಜ್ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಈ ವಿಚಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಆದರೆ ನಮ್ಮ ತಂಡದ ನಾಯಕನ ಮೇಲೆ ನಮಗೆ ಸಂಪೂರ್ಣ ಗೌರವವಿದೆ. ತಂಡದ ನಾಯಕನಾಗಿ ಹಾಗೂ ಆಟಗಾರನಾಗಿ ಭ್ರಷ್ಟಾಚಾರವನ್ನು ಕ್ರೀಡೆಯಿಂದ ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆಯನ್ನು ಸಹ ಆಟಗಾರರಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಆಡಳಿತ ಮಂಡಳಿ ತಂಡದ ಎಲ್ಲಾ ಆಟಗಾರರ ಮೇಲೆ ಹೆಚ್ಚಿನ ನಿಗಾವಹಿಸಲಿದ್ದು ಆಟಗಾರರ ವಿಶ್ರಾಂತಿ ಸಮಯ ಹಾಗೂ ಮತ್ತಿತರ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಸರಣಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಬ್ಯಾಟ್ಸ್ ಮನ್ ಗಳಾದ ಶಾರ್ಜೀಲ್ ಖಾನ್ ಹಾಗೂ ಖಲೀದ್ ಲತೀಫ್ ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್ ನಿಂದ ಪಿಸಿಬಿ ಅಮಾನತು ಮಾಡಿತು.