ಪುಣೆ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ದಾಳಿಗೆ ತತ್ತರಿಸಿ ಮೂರು ವಿಕೆಟ್ ಕಳೆದುಕೊಂಡಿದೆ.
ಮಹಾರಾಷ್ಟ್ರದ ಪುಣೆಯಲ್ಲಿ 2ನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪುಣೆ ಪಿಚ್ ಬ್ಯಾಟಿಂಗ್ ಸಹಕಾರಿಯಾಗುವ ನಿರೀಕ್ಷೆ ಇರುವುದರಿಂದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ. ಆದರೆ ವೇಗಿ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ತಂಡದ ಯೋಜನೆಗೆ ಆರಂಭದಲ್ಲೇ ಶಾಕ್ ನೀಡಿದ್ದು, ಮಾರ್ಟಿನ್ ಗಪ್ಟಿಲ್ ಮತ್ತು ಕೊಲಿನ್ ಮನ್ರೋ ಅವರ ವಿಕೆಟ್ ಪಡೆದಿದ್ದಾರೆ. ಇದರ ಬೆನ್ನಲ್ಲೇ ಜಸ್ ಪ್ರೀತ್ ಬುಮ್ರಾ ನಾಯಕ ವಿಲಿಯಮ್ಸನ್ ಅವರನ್ನು ಎಲ್ ಬಿ ಬಲೆಗೆ ಕೆಡವಿದರು.
ನ್ಯೂಜಿಲೆಂಡ್ ತಂಡ ಕೇವಲ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ನ್ಯೂಜಿಲೆಂಡ್ ತಂಡಕ್ಕೆ ಕಳೆದ ಪಂದ್ಯದಲ್ಲಿ ಗೆಲುವು ದಕ್ಕಿಸಿಕೊಟ್ಟಿದ್ದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಹಾಗೂ ಟಾಮ್ ಲಾಥಮ್ ಕ್ರೀಸ್ ನಲ್ಲಿದ್ದು, ಇಂದಿನ ಪಂದ್ಯದಲ್ಲಿಯೂ ಇವರಿಬ್ಬರ ಜೋಡಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಕುಲದೀಪ್ ಯಾದವ್ ಬದಲಿಗೆ ಅಕ್ಸರ್ ಪಟೇಲ್ ರನ್ನು ತಂಡಕ್ಕೆ ಅಯ್ಕೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಕಳೆದ ಪಂದ್ಯವನ್ನಾಡಿದ್ದ ಆಟಗಾರರೇ ಎರಡನೇ ಪಂದ್ಯಕ್ಕೂ ಮುಂದುವರೆದಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 11.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos