ಆರ್ ಸಿಬಿ ವಿರುದ್ಧ ಗೆದ್ದ ರಾಜಸ್ಥಾನ ತಂಡ
ಬೆಂಗಳೂರು: ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿಯೇ ಗೆಲ್ಲುವ ಮೂಲಕ ಜಯದ ಖಾತೆ ತೆರೆದಿದ್ದ ಆರ್ಸಿಬಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.
ಇಂದು ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ರಹಾನೆ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 19 ರನ್ಗಳಿಂದ ಸೋಲನುಭವಿಸಿದೆ.
ರಾಜಸ್ಥಾನ ರಾಯಲ್ಸ್ ನೀಡಿದ್ದ 218 ರನ್ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ತಂಡದ ನಾಯಕ ವಿರಾಟ್ ಕೊಹ್ಲಿ (57 ರನ್) ಭರ್ಜರಿ ಅರ್ಧ ಶತಕ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಡಿಕಾಕ್ (26 ರನ್) ಮತ್ತು ಡಿವಿಲಿಯರ್ಸ್ (20 ರನ್) ಬೇಗನೇ ನಿರ್ಗಮಿಸು ಮೂಲ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಇನಿಂಗ್ಸ್ ಕೊನೆಯಲ್ಲಿ ಮನದೀಪ್ ಸಿಂಗ್ (47 ಅಜೇಯ) ಮತ್ತು ವಾಷಿಂಗ್ಟನ್ ಸುಂದರ್ (35 ರನ್) ಆಕರ್ಷಕ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರಾದರೂ, ಗೆಲುವು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಆರ್ ಸಿಬಿ 19 ರನ್ ಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು. ರಾಜಸ್ಥಾನ ರಾಯಲ್ಸ್ ಪರ ಕನ್ನಡಿಗ ಶ್ರೇಯಸ್ ಗೋಪಾಲ್ ಆಕರ್ಷಕ ಬೌಲಿಂಗ್ ದಾಳಿ ನಡೆಸಿ 22 ರನ್ ನೀಡಿ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯ್ಸ್ ತಂಡ ಸಂಜು ಸ್ಯಾಮ್ಸನ್ (92 ರನ್) ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ರಾಯಲ್ಸ್ ಪರ ನಾಯಕ ಅಜಿಂಕ್ಯ ರಹಾನೆ(36 ರನ್), ಬೆನ್ ಸ್ಟೋಕ್ಸ್ (27 ರನ್) ಮತ್ತು ಬಟ್ಲರ್ (23 ರನ್) ರನ್ ಗಳಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.