ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಮುಂಬೈ ಇಂಡಿಯನ್ಸ್ ತಂಡ 46 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಮುಂಬೈ ನೀಡಿದ್ದ 214 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದೆ ಬೆಂಗಳೂರು ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇಂದು ಪ್ರಮುಖವಾಗಿ ಆರ್ ಸಿಬಿಗೆ ತನ್ನ ಪ್ರಬಲ ಬ್ಯಾಟಿಂಗ್ ಗೇ ಮುಳುವಾಯಿತು ಎನ್ನಬಹುದು. ಏಕೆಂದರೆ ದೈತ್ಯ ಬ್ಯಾಟ್ಸಮನ್ ಗಳ ಹೊರತಾಗಿಯಾ ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿ ಆರ್ ಸಿಬಿಯ ಯಾವೊಬ್ಬ ಬ್ಯಾಟ್ಸಮನ್ ಕೂಡ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತು ಆಡುವ ಪ್ರಯತ್ನ ಮಾಡಲೇ ಇಲ್ಲ. ಆರಂಭಿಕರಾಗಿ ಕ್ರೀಸ್ ಗೆ ಆಗಮಿಸಿದ ಕೊಹ್ಲಿ ಇನ್ನಿಂಗ್ಸ್ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿ ಅಜೇಯರಾಗಿ ಉಳಿದಿದ್ದರು.
ಆದರೆ ಕೊಹ್ಲಿಗೆ ತಂಡದ ಇತರೆ ಯಾವೊಬ್ಬ ಆಟಗಾರ ಕೂಡ ಸಾಥ್ ನೀಡಲಿಲ್ಲ. ಕ್ವಿಂಟನ್ ಡಿ ಕಾಕ್ (19 ರನ್), ಮನ್ ದೀಪ್ ಸಿಂಗ್ (16 ರನ್) ಮತ್ತು ಕ್ರಿಸ್ ವೋಕ್ಸ್ (11) ಎರಡಂಕಿ ದಾಟಿದ್ದು, ಬಿಟ್ಟರೆ ತಂಡದ ಮತ್ತಾವ ಆಟಗಾರನೂ ಎರಡಂಕಿ ದಾಟಲಿಲ್ಲ. ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಅಜೇಯ 92 ರನ್ ಗಳಿಸಿದರು. ಅವರ ಅದ್ಬುತ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಗಳು ಸೇರಿದ್ದವು. ಅಂತಿಮವಾಗಿ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ ಗಳನ್ನು ಮಾತ್ರ ಗಳಿಸಿತು.
ಇನ್ನು ಮುಂಬೈ ಪರ ಕೃಣಾಲ್ ಪಾಂಡ್ಯಾ 3 ವಿಕೆಟ್ ಪಡೆದರೆ, ಬುಮ್ರಾ ಮತ್ತು ಮೆಕ್ ಲೀನಿಘನ್ ತಲಾ 2 ವಿಕೆಟ್ ಪಡೆದರು. ಮಯಾಂಕ್ ಮಾರ್ಕಂಡೆ ಒಂದು ವಿಕೆಟ್ ಪಡೆದರು.