ಮುಂಬೈ: ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ರಾಹುಲ್ ದ್ರಾವಿಡ್ ಮುದಾಳತ್ವದ ತಂಡ ಖಂಡಿತ ವಿಶ್ವಕಪ್ ನೊಂದಿಗೆ ಭಾರತಕ್ಕೆ ಆಗಮಿಸಲಿದೆ ಎಂದು ಬಿಸಿಸಿಐ ಕಾರ್ಯಕಾರಿ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ.
ಮಂಗಳವಾರ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಭಾರತ ತಂಡ ಮಣಿಸಿದ್ದು, ಭರ್ಜರಿ 203 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಮತ್ತೆ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶ ಮಾಡಿದೆ.
ಈ ವಿಚಾರ ತಿಳಿದ ಬೆನ್ನಲ್ಲೇ ಸುದ್ದಿಸಂಸ್ಥೆಯೊಂದಿಗೆ ತಮ್ಮ ಸಂತಸ ಹಂಚಿಕೊಂಡ ಬಿಸಿಸಿಐ ಕಾರ್ಯಕಾರಿ ಅಧ್ಯಕ್ಷ ಸಿಕೆ ಖನ್ನಾ ಅವರು, ಈ ಬಾರಿ ಖಂಡಿತ ಮತ್ತೆ ಭಾರತ ತಂಡ ವಿಶ್ವಕಪ್ ನೊಂದಿಗೆ ವಾಪಸ್ ಆಗಲಿದೆ. ರಾಹುಲ್ ದ್ರಾವಿಡ್ ನೇತೃತ್ವದ ತಂಡದ ಮೇಲೆ ತಮಗೆ ವಿಶ್ವಾಸವಿದ್ದು, ಟೂರ್ನಿಯಲ್ಲಿ ಭಾರತ ತಂಡ ಅದ್ಬುತ ಪ್ರದರ್ಶನ ತೋರುತ್ತಿದೆ. ಹಾಲಿ ತಂಡದ ಆಟಗಾರರಿಗೆ ಅತ್ಯುತ್ತಮ ಭವಿಷ್ಯವಿದೆ ಎಂದು ಸಿಕೆ ಖನ್ನಾ ಹೇಳಿದ್ದಾರೆ.