"ಅಸಾಮಾನ್ಯ ಕ್ರಿಕೆಟಿಗನೊಬ್ಬ ನನ್ನ ಕ್ರಿಕೆಟ್ ಜೀವನಕ್ಕೆ ಅಡ್ಡಿಯಾದ" ಎಂದು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
2010 ರಲ್ಲಿ ಟೆಸ್ಟ್ ಪಂದ್ಯವನ್ನಾಡಿರುವ ದಿನೆಶ್ ಕಾರ್ತಿಕ್ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ಕ್ರಿಕೆಟ್ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಲು ಅಡ್ಡಿಯಾದ ಸವಾಲುಗಳ ಬಗ್ಗೆ ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಕೀಪರ್-ಬ್ಯಾಟ್ಸ್ಮನ್ ಆಗಿದ್ದ ಕಾಲಘಟ್ಟದಲ್ಲೆ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ನೀಡಿದ್ದ ಎಂಎಸ್ ಧೋನಿ ಕೀಪರ್-ಬ್ಯಾಟ್ಸ್ಮನ್ ಜವಾಬ್ದಾರಿಯ ಪರಿಭಾಷೆಯನ್ನೇ ಬದಲಿಸುವಂತಹ ಆಟ ಪ್ರದರ್ಶಿಸಿದ್ದರು. ದಿನೇಶ್ ಕಾರ್ತಿಕ್ ಪ್ರಕಾರ ಎಂಎಸ್ ಧೋನಿ ಓರ್ವ ಅಸಮಾನ್ಯ ಕ್ರಿಕೆಟಿಗನಾಗಿದ್ದು, ಅಂತಹ ಅಸಮಾನ್ಯ ಕ್ರಿಕೆಟಿಗನಿಗಿಂತ ಅದ್ಭುತವಾದ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದೇ ತಮ್ಮ ಕ್ರಿಕೆಟ್ ಜೀವನದಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣ.
"ನಾನು ಅದ್ಭುತವಾದ ಆಟ ಪ್ರದರ್ಶಿಸುತ್ತಿರಲಿಲ್ಲ, ಸ್ಥಿರತೆಯೂ ಇರಲಿಲ್ಲ, ಇದೇ ಸಮಯದಲ್ಲಿ ಎಂಎಸ್ ಧೋನಿ ಅದ್ಭುತ ಆಟ ಪ್ರದರ್ಶಿಸಲು ಪ್ರಾರಂಭಿಸಿ, ಕೀಪರ್-ಬ್ಯಾಟ್ಸ್ಮನ್ ಜವಾಬ್ದಾರಿಯ ಪರಿಭಾಷೆಯನ್ನು ಬದಲಿಸುವಂತಹ ಆಟ ಆಡುತ್ತಿದ್ದರು. ನಂತರದ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ ಕಂಡ ಅದ್ಭುತ ನಾಯಕರಾದರು ಎಂದು ಅಫ್ಘಾನಿಸ್ತಾನ ಟೆಸ್ಟ್ ಗೆ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ವೃದ್ಧಿಮಾನ್ ಸಾಹ ಗಾಯಗೊಂಡಿರುವ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ತಂಡಕ್ಕೆ ಆಯ್ಕೆಯಾಗಿದ್ದು, ಈ ವರೆಗೂ ಸುಮಾರು 87 ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕಳೆದುಕೊಂಡಿರುವ ದಿನೇಶ್ ಕಾರ್ತಿಕ್ 2010 ರ ನಂತರ ಮೊದಲ ಬಾರಿಗೆ ಟೆಸ್ಟ್ ಆಡುತ್ತಿದ್ದಾರೆ.