ನವದೆಹಲಿ: ಮುಂಬರುವ ತ್ರಿಕೋನ ಟಿ20 ಸರಣಿಗೆ ಸದ್ಯ ಟೀಂ ಇಂಡಿಯಾ ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು ತಂಡದಲ್ಲಿ ಕನ್ನಡಿಗ ಮಾಯಾಂಕ್ ಅಗರವಾಲ್ ಆಯ್ಕೆಯಾಗದಿದ್ದಕ್ಕೆ ಕಾರಣ ಬಹಿರಂಗಗೊಂಡಿದೆ.
ವಿಜಯ್ ಹಜಾರೆ ಟೂರ್ನಿಗೂ ಮೊದಲೆ ತ್ರಿಕೋಶ ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಫೆಬ್ರವರಿ 20ರಂದೇ ತಂಡವನ್ನು ಆಯ್ಕೆ ಮಾಡಿದ್ದು ಫೆಬ್ರವರಿ 25ರಂದು ತಂಡವನ್ನು ಪ್ರಕಟ ಮಾಡಲಾಗಿತ್ತು. ಬಿಸಿಸಿಐ ಆಯ್ಕೆ ಸಮಿತಿ ಮುಂಚಿತವಾಗಿಯೇ ತಂಡವನ್ನು ಆಯ್ಕೆ ಮಾಡಿದ್ದರಿಂದ ಮಾಯಾಂಕ್ ಅಗರವಾಲ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯ ಫೆಬ್ರವರಿ 21ರಂದು ನಡೆದಿದ್ದು ಈ ಪಂದ್ಯದಲ್ಲಿ ಮಾಯಾಂಕ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದು 90 ರನ್ ಬಾರಿಸಿ ಕರ್ನಾಟಕ ತಂಡದ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಟೂರ್ನಿಯ ಸೆಮೀಸ್ ನಲ್ಲಿ 81 ರನ್ ಸಿಡಿಸಿದ್ದ ಅವರು ಭರ್ಜರಿ ಫಾರ್ಮ್ ನಲ್ಲಿದ್ದರು ಟೀಂ ಇಂಡಿಯಾ ತಂಡಕ್ಕೆ ಯಾಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಮೂಡಿದ್ದವು.
ಇನ್ನು ಮಾಯಾಂಕ್ ರನ್ನು ಆಯ್ಕೆ ಮಾಡದ್ದನ್ನು ಬಿಸಿಸಿಐ ಪ್ರಧಾನ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಆಟಗಾರ ತನ್ನ ಸ್ಥಾನದ ಬಗ್ಗೆ ಗೊಂದಲಕ್ಕೀಡಾಗಬಾರದು. ಪ್ರತಿ ಆಟಗಾರನ ಬಳಿ ನಮ್ಮ ಸಮಿತಿ ಮಾತನಾಡುತ್ತದೆ. ಆಯ್ಕೆಯಾಗದ ಆಟಗಾರರೊಂದಿಗೂ ನಾವು ಮಾತನಾಡುತ್ತೇವೆ. ಫೈನಲ್ ಗೂ ಮೊದಲು ಮಯಾಂಕ್ ಜತೆ ಮಾತುಕತೆ ನಡೆಸಿದ್ದು ಸ್ಥಿರ ಪ್ರದರ್ಶನದೊಂದಿಗೆ ಆತ ಆಯ್ಕೆಯಾಗಬಲ್ಲ ಆಟಗಾರನ ಪಟ್ಟಿಯಲ್ಲಿದ್ದಾನೆ ಎಂದು ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos