ಕೊಲಂಬೋ: ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 17 ರನ್ ಗಳ ರೋಚಕ ಜಯ ಸಾಧಿಸಿದೆ.
ಭಾರತ ನೀಡಿದ 177ರನ್ ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಭಾರತದ ವೇಗಿ ವಾಷಿಂಗ್ಟನ್ ಸುಂದರ್ ಆರಂಭದಲ್ಲೇ ಮಾರಕವಾಗಿ ಪರಿಣಮಿಸಿದರು. ತಂಡದ ಮೊತ್ತ ಕೇವಲ 40 ರನ್ ಗಳಾಗುವಷ್ಟರಲ್ಲಿಯೇ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರಾದ ತಮೀಮ್ ಇಕ್ಬಾಲ್ 27 ರನ್ ಗಳಿಸಿ ಔಟ್ ಆದರೆ, ಲಿತನ್ ದಾಸ್ 7 ರನ್ ಗೆ ನಿರ್ಗಮಿಸಿದರು. ಬಳಿಕ ಬಂದ ಸೌಮ್ಯ ಸರ್ಕಾರ ಕೇವಲ 1 ರನ್ ಗಳಿಸಿ ಔಟ್ ಆದರೆ, ಮಹಮದುಲ್ಲಾ 11 ರನ್ ಗಳಿಸಿ ಔಟ್ ಆದರು.
ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಮುಷ್ಪಿಕರ್ ರಹೀಂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ಮುಷ್ಫಿಕರ್ ಜೊತೆಗೂಡಿದ ಶಬ್ಬೀರ್ ರೆಹಮಾನ್ 27 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಆದರೆ 17ನೇ ಓವರ್ ನಲ್ಲಿ ಶಬ್ಬೀರ್ ಕೂಡ ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಔಟ್ ಆದರು. ಅಂತಿಮ ಓವರ್ ನಲ್ಲಿ ಹಸ್ಸನ್ ಕೂಡ 7 ರನ್ ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.