ಕೋಲಂಬೊ: ನಿಡಾಹಸ್ ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಗಳಿಂದ ಜಯ ಗಳಿಸಿದ ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದ್ದು ಭಾರತದ ಜತೆಗೆ ಸೆಣೆಸಲಿದೆ.
ಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಭಾರೀ ವಾಗ್ವಾದ ನಡೆದು ಇತಿಹಾಸದಲ್ಲೇ ಕಪ್ಪುುಚುಕ್ಕೆಗಳಲ್ಲೊಂದಾಗಿ ದಾಖಲಾಗುವ ಸಾಧ್ಯತೆ ಇತ್ತು. ಬಾಂಗ್ಲಾದೇಶ ಪಂದ್ಯದ ಅಂತಿಮ ಓವರ್ ವೇಳೆ ಸೋಲಿನ ಭೀತಿಯಿಂದಾಗಿ ಹೈಡ್ರಾಮಾವನ್ನೇ ಮಾಡಿತ್ತು. ಇದು ಲಂಕಾ ಪಂದ್ಯವನ್ನು ಸೋಲಲು ಕಾರಣವಾಯಿತು.
ಬಾಂಗ್ಲಾ ಎದುರಿಸಿದ ಅಂತಿಮ ಓವರ್ ನಲ್ಲಿ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಕ್ರೀಸ್ ನಲ್ಲಿದ್ದರು, ಅಂತಿಮ ಓವರ್ ಮಾಡಿದ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2 ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ನಾಯಕ ಶಕೀಬ್ ಬ್ಯಾಟ್ಸ್ ಮನ್ ಗಳನ್ನು ಮೈದಾನದಿಂದ ಹೊರಕ್ಕೆ ಕರೆದರು. ಇದು ಸಂಭವಿಸಿದ್ದರೆ ಬಾಂಗ್ಲಾ ಅನರ್ಹಗೊಳ್ಳುವ ಸಂಭವವೂ ಇತ್ತು. ಲಂಕಾ ಅಂತಿಮ ಹಂತಕ್ಕೇರುತ್ತಿತ್ತು.
ಇದಾದ ನಂತರ ಮತ್ತೆ ಬಾಂಗ್ಲಾ ಆಟಗಾರರು ಬ್ಯಾಟಿಂಗ್ ಮಾಡಿದರು. ಮಹಮದುಲ್ಲ ಒಂದು ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಕೊನೆಯ 4 ಎಸೆತದಲ್ಲಿ ಬೇಕಾದ 12 ರನ್ ಸಂಪಾದಿಸಿ ತಂಡ ಪಂದ್ಯವನ್ನು ಗೆದ್ದು ಬೀಗಿತು.
ಶ್ರೀಲಂಕಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ, 19.5 ಓವರ್ ನಲ್ಲಿ 8 ವಿಕೆಟ್ ಕಳೆದು ಕೊಂಡು ಗುರಿ ಮುಟ್ಟಿತ್ತು. ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ 50 ರನ್ ಹಾಗೂ ಮಹಮದುಲ್ಲಾ ಅಜೇಯ 43 ರನ್ ಗಳ ನೆರವಿನಿಂದ ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿತು.