ಕೊಲಂಬೊ: ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ತ್ರಿಕೋನ ಟ್ವೆಂಟಿ-20 ಸರಣಿಯ ಕೊನೆಯ ಲೀಗ್ ಪಂದ್ಯದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ.
ಮೂಲಗಳು ತಿಳಿಸಿರುವಂತೆ ಅಂಪೈರ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್ಗೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ತಲಾ ಒಂದು ಡಿಮೆರಿಟ್ ಅಂಕ ನೀಡಿದೆ.
ಪಂದ್ಯದ ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶ ಅಂಪೈರ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದ ನಾಯಕ ಹಸನ್ ಬೌಂಡರಿ ಲೈನ್ ಬಳಿ ಬಂದು ತನ್ನ ಬ್ಯಾಟ್ಸ್ಮನ್ಗಳನ್ನು ವಾಪಸ್ ಬರುವಂತೆ ಸೂಚನೆ ನೀಡಿದ್ದರು. ಇಬ್ಬರು ದಾಂಡಿಗರಿಗೆ ಸಂದೇಶ ಕಳುಹಿಸುವ ನೆಪದಲ್ಲಿ ತಂಡದಿಂದ ಮೈದಾನಕ್ಕೆ ಕಳುಹಿಸಲ್ಪಟ್ಟಿದ್ದ ಮೀಸಲು ಆಟಗಾರ ನೂರುಲ್ ಅವರು ಸಹ ಆಟಗಾರ ರನೌಟ್ ಆಗಿರುವ ವಿಷಯಕ್ಕೆ ಸಂಬಂಧಿಸಿ ಶ್ರೀಲಂಕಾ ನಾಯಕ ತಿಸರಾ ಪೆರೇರಾ ಅವರೊಂದಿಗೆ ವಾಗ್ವಾದ ನಡೆಸಿದ್ದರು.
ಈ ಸಂಬಂಧ ಐಸಿಸಿ ಮ್ಯಾಚ್ ರೆಫರಿ ಬ್ರಾಡ್ ಅವರು ಐಸಿಸಿಗೆ ವರದಿ ನೀಡಿದ್ದು, ವರದಿ ಪರಿಶೀಲಿಸಿದ ಐಸಿಸಿ ಅಧಿಕಾರಿಗಳು ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್ ಗೆ ದಂಡ ವಿಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಮ್ಯಾಚ್ ರೆಫರಿ ಬ್ರಾಡ್ ಅವರು,‘‘ಶುಕ್ರವಾರದ ಘಟನೆ ದುರದೃಷ್ಟಕರ. ಯಾವುದೇ ಪ್ರಕಾರದ ಕ್ರಿಕೆಟ್ನಲ್ಲಿ ಆಟಗಾರ ಈ ರೀತಿ ವರ್ತಿಸುವುದನ್ನು ನೋಡಲು ಬಯಸಲಾರೆ. ಇದೊಂದು ಪ್ರಮುಖ ಪಂದ್ಯವಾಗಿದ್ದರೂ ಇಬ್ಬರು ಆಟಗಾರರ ವರ್ತನೆ ಅಸ್ವೀಕಾರಾರ್ಹವಾಗಿತ್ತು’’ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos