ಕ್ರಿಕೆಟ್

ವಿಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಗಳಿಂದ ಕೈ ಬಿಟ್ಟಿರುವುದಕ್ಕೆ ಜಾದವ್ ಅಚ್ಚರಿ!

Nagaraja AB

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು  ಬಿಸಿಸಿಐ  ಪ್ರಕಟಿಸಿದ್ದು, ಮೊದಲ ಎರಡು ಪಂದ್ಯಗಳಿಂದ  ದೂರ ಉಳಿದಿದ್ದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್  ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.

ಆದರೆ, ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಕೇದಾರ್  ಜಾದವ್  ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ.

ಈ ಸಂಬಂಧ ಪ್ರತಿಕ್ರಿಯಿಸಿರುವ  ಆಲ್ ರೌಂಡರ್  ಕೇದಾರ್ ಜಾದವ್, ಆಯ್ಕೆದಾರರು ತಮ್ಮನ್ನು  ಕೈಬಿಟ್ಟಿರುವುದರ ಕುರಿತು ಯಾವುದೇ  ಮಾತುಕತೆ ನಡೆಸಿಲ್ಲ. ಏಕೆ ತಮ್ಮನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ದೇವಧರ್  ಟ್ರೋಫಿಯಲ್ಲಿಯೂ ಭಾರತ ಎ ತಂಡದಿಂದ ಜಾದವ್ ಅವರನ್ನು ಕೈ  ಬಿಡಲಾಗಿತ್ತಾದರೂ  ಮಧ್ಯಭಾಗದಲ್ಲಿ ಮತ್ತೆ ತಂಡ ಸೇರಿಕೊಂಡಿದ್ದ ಜಾದವ್  ಮೂವರು ರಾಷ್ಟ್ರೀಯ ಆಯ್ಕೆದಾರರ ಸಮ್ಮುಖದಲ್ಲಿಯೇ 25 ಎಸೆತದಲ್ಲಿ 41 ರನ್ ಗಳಿಸಿದ್ದರು. ಆದರೂ ಏಕದಿನ ಪಂದ್ಯಗಳಲ್ಲಿ ಸ್ಥಾನ ಪಡೆಯುವುದರಲ್ಲಿ ವಂಚಿತರಾಗಿದ್ದಾರೆ.

ಆಯ್ಕೆದಾರರ ಯೋಚನೆ ಹೇಗಿದೆಯೋ ಗೊತ್ತಿಲ್ಲ. ರಣಜಿ ಟ್ರೋಫಿಯಲ್ಲಿ ಆಡಬಹುದು ಎಂದು 33 ವರ್ಷದ ಮಹಾರಾಷ್ಟ್ರದ ಆಟಗಾರರ ಹೇಳುತ್ತಾರೆ.

ಆದರೆ, ಈ ಹಿಂದೆ ಅವರು ಗಾಯದ ಸಮಸ್ಯೆಗೊಳಗಾಗಿದ್ದರಿಂದ ಮೂರು ಏಕದಿನ ಪಂದ್ಯಗಳಿಂದ  ಕೈಬಿಡಲಾಗಿದೆ ಎಂದು ಮುಖ್ಯ ಆಯ್ಕೆದಾರ ಎಂಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಏಷ್ಯಾ ಕಪ್ ಪಂದ್ಯಾವಳಿ ವೇಳೆಯಲ್ಲಿ ಕೇದಾರ್ ಜಾದವ್ ಗಾಯಗೊಂಡಿದ್ದರಿಂದ ಅವರನ್ನು ಕೈ ಬಿಡಲಾಗಿದೆ. ಭಾರತ ಎ ತಂಡ ಇಂದು ಗೆದ್ದರೆ ಮತ್ತೊಂದು ಪಂದ್ಯದಲ್ಲಿ ಕೇದಾರ್ ಗೆ ಅವಕಾಶ ನೀಡಲಾಗುವುದು, ಶನಿವಾರ ದೇವಧರ್ ಫೈನಲ್ ಪಂದ್ಯ ನಡೆಯಲಿದ್ದು, ನಾಲ್ಕನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾದಲ್ಲಿ ಹೆಚ್ಚುವರಿ ಆಟಗಾರರಾಗಿ ಕೇದರ್ ಜಾದವ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇದಾರ್ ಜಾದವ್ ಗಾಯಗೊಂಡಿದ್ದರು.

SCROLL FOR NEXT