ಕ್ರಿಕೆಟ್

ನನ್ನ ಸಾಮರ್ಥ್ಯ ನನಗೆ ತಿಳಿದರೇ ಸಾಕು, ಪ್ರಪಂಚಕ್ಕಲ್ಲ: ರವೀಂದ್ರ ಜಡೇಜಾ

Shilpa D

ಕಟಕ್‌: ಕಳೆದ ಹಲವು ವರ್ಷಗಳಿಂದ ಆಲ್‌ರೌಂಡರ್ ಆಗಿ ಟೀಮ್ ಇಂಡಿಯಾಗೆ ಆಧಾರ ಸ್ಥಂಭವಾಗಿರುವ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಇದರ ಫಲವಾಗಿ ಭಾರತ 4 ವಿಕೆಟ್‌ಗಳಿಂದ ಪಂದ್ಯ ಗೆದ್ದು ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು.

ಭಾನುವಾರದ ಪಂದ್ಯದ ನಿರ್ಣಾಯಕ ಸಮಯದಲ್ಲಿ ರವೀಂದ್ರ ಜಡೇಜಾ ಅಜೇಯ 39 ರನ್ ಗಳಿಸಿ ತಂಡವನ್ನು ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ ಜಡೇಜಾ, " ಯಾವ ಅವಕಾಶ ಸಿಕ್ಕರೂ ನನ್ನ ಕಡೆಯಿಂದ ತಂಡದ ಗೆಲುವಿಗೆ ಸಾಧ್ಯವಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ಸೀಮಿತ ಓವರ್‌ಗಳಲ್ಲಿ ನನ್ನ ಸಾಮರ್ಥ್ಯ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಸಿಗಬೇಕು. ನನಗಾಗಿ ಇದನ್ನು ಸಾಬೀತುಪಡಿಸಲ ಪ್ರಯತ್ನಿಸುತ್ತೇನೆ. ಆದರೆ, ವಿಶ್ವದ ಎದುರು ಸಾಬೀತುಪಡಿಸಲು ಇಷ್ಟಪಡುವುದಿಲ್ಲ," ಎಂದರು.  

ಭಾನುವಾರ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಬೌಲಿಂಗ್‌ನಲ್ಲಿ 54/1 ನಿರ್ವಹಿಸಿದ್ದರು. ನಂತರ, ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ  39 ರನ್‌ ಗಳಿಸಿದ್ದರು.

"ಮಧ್ಯಮ ಕ್ರಮಾಂಕದಲ್ಲಿ ತಕ್ಷಣ ಮೂರು ವಿಕೆಟ್‌ ಉರುಳಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಸಾಮಾನ್ಯ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಉರುಳುತ್ತವೆ. ಬ್ಯಾಟಿಂಗ್ ಮಾಡಲು ಚೆನ್ನಾಗಿತ್ತು. ನಮಗೂ ಗೊತ್ತಿತ್ತು ಬ್ಯಾಟಿಂಗ್ ಮಾಡಬಹುದು ಎಂದು, ಅದರಂತೆ ಗುರಿ ಮುಟ್ಟಿದೆವು. ನನಗೆ ಅನಿಸಿದ ಹಾಗೇ ಇದು ನಿರ್ಣಾಯಕ ಇನಿಂಗ್ಸ್ ಆಗಿತ್ತು. ನಾನು ಕ್ರೀಸ್‌ಗೆ ಬಂದಾಗ ವಿರಾಟ್ ಕೊಹ್ಲಿ ಜತೆ ಬ್ಯಾಟಿಂಗ್‌ ಮಾಡುವಾಗ ಅತ್ಯುತ್ತಮವಾಗಿಯೇ ಇತ್ತು. ಬೌಲಿಂಗ್‌ ಮಾಡಿದ್ದು ಕೂಡ ಖುಷಿ ನೀಡಿದೆ," ಎಂದು ತಿಳಿಸಿದರು.

ವಿರಾಟ್‌ ಕೊಹ್ಲಿ ಜತೆ ಜತೆಯಾಟದ ಬಗ್ಗೆ ಪ್ರತಿಕ್ರಿಯಿಸಿ," ಬ್ಯಾಟಿಂಗ್ ಮಾಡಲು ಈ ವಿಕೆಟ್ ಚೆನ್ನಾಗಿದೆ ಎಂದು ನಾವು ಮಾತನಾಡಿಕೊಂಡಿದ್ದೆವು. ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದು ಪಂದ್ಯವನ್ನು ಮುಗಿಸುವಂತೆ ನಾಯಕ ಕೊಹ್ಲಿ ಹೇಳಿದ್ದರು. ಅನಿರೀಕ್ಷಿತವಾಗಿ ಅವರು ಔಟ್ ಆದರು. ನಂತರ, ಅವರು ನನಗೆ ನಿರ್ಲಕ್ಷೆಯ ಆಟ ಆಡದೆ, ಸ್ವಾಭಾವಿಕ ಬ್ಯಾಟಿಂಗ್ ಮಾಡುವಂತೆ ಸಲಹೆ ನೀಡಿದ್ದರು," ಎಂದು ಜಡೇಜಾ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 85 ರನ್‌ ದಾಖಲಿಸಿದ್ದರು. ಇದಕ್ಕೂ ಮುನ್ನ ರೋಹಿತ್‌ ಶರ್ಮಾ ಹಾಗೂ ಕೆ.ಎಲ್ ರಾಹುಲ್‌ ತಲಾ ಅರ್ಧ ಶತಕ ಬಾರಿಸಿದ್ದರು.
 

SCROLL FOR NEXT