ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುತ್ತದೆ ಎಂಬ ನಂಬಿಕೆ ಕಳೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ವಾಸೀಂ ಖಾನ್ ಈ ಸರಣಿಗಾಗಿ ನಾವು ಸಾಯೋವರೆಗೂ ಕಾಯೋಕ್ಕಾಗಲ್ಲ ಎಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ನಡೆಸಲೇಬೇಕು ಇಲ್ಲದಿದ್ದರೆ ವಿಧಿ ಇಲ್ಲ ಎಂಬಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಿದೆ. ಇನ್ನು ಎಷ್ಟು ದಿನ ದ್ವಿಪಕ್ಷೀಯ ಸರಣಿಗಾಗಿ ಕಾಯಬೇಕು ಎಂದರು.
ಇದೊಂದು ಸವಾಲಿನ ಕೆಲಸವಾಗಿದ್ದು ಇದು ಶೀಘ್ರದಲ್ಲೇ ಪರಿಹಾರ ಸಿಗುತ್ತದೆ ಎಂದು ಯೋಚಿಸಲಾಗುತ್ತಿಲ್ಲ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತಿದ್ದು ಸದ್ಯದಲ್ಲಿ ಇದು ಸಂಭವಿಸುವ ಸಾಧ್ಯತೆ ಇಲ್ಲ. ಆದರೆ ನಾವು ಶತಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಾವು ಅವರನ್ನು ಆಡಲು ಕೇಳುತ್ತಿದ್ದೇವೆ. ಆದರೆ ಮುಂದೆ ಅವರೇ ನಮ್ಮನ್ನು ಕೇಳುವಂತಾ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತೇವೆ. ನಾವು ಅದನ್ನು ಮಾಡಲೇಬೇಕು. ಭಾರತದ ವಿರುದ್ಧ ನಾವು ಆಡದಿದ್ದರೆ ನಮ್ಮ ಜೀವನ ನಡೆಯುತ್ತದೆ. ಪಾಕಿಸ್ತಾನದ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ತಂಡ ಮತ್ತು ಆಟಗಾರರು ಯಶಸ್ಸು ಸಾಧಿಸುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದರು.