ಮುಂಬೈ: ಟೀಂ ಇಂಡಿಯಾದ ಉದಯೋನ್ಮುಖ ಆಟಗಾರಾರದ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್ ಅಗರವಾಲ್ ಆರಂಭಿಕರಾಗಿ ಕ್ಲಿಕ್ ಆದರೆ ತಂಡ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೌತಮ್ ಗಂಭೀರ್, ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿಶಾ ತಂಡದ ಪರ ಮೈದಾನಕ್ಕಿಳಿದು ತಮ್ಮ ಸಾಮರ್ಥ್ಯ ಏನು ಎಂಬುದನ್ನ ಈಗಾಗಲೇ ತೋರಿಸಿದ್ದಾರೆ. ಮಯಾಂಕ್ - ಪೃಥ್ವಿ ಟೀಂ ಇಂಡಿಯಾದ ಬಹುಕಾಲದ ಆರಂಭಿಕ ಜೋಡಿಗಳಾಗಿ ಉಳಿಯಬಹುದು. ಈಗಾಗಲೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕೆ.ಎಲ್. ರಾಹುಲ್, ಮುರುಳಿ ವಿಜಯ್, ಶಿಖರ್ ಧವನ್, ಹನುಮ ವಿಹಾರಿಗೆ ಚಾನ್ಸ್ ನೀಡಿ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗಿದೆ. ಆದರೆ, ಇವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ. ಹೀಗಾಗಿ ಮಯಾಂಕ್ ಮತ್ತು ಪೃಥ್ವಿ ಶಾ ಅವರಿಗೂ ಒಂದು ಚಾನ್ಸ್ ನೀಡಬೇಕು ಎಂದು ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಪೃಥ್ವಿ ಶಾ ಹಾಗೂ ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಮಯಾಂಕ್ ಅಗರವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಟೀಂ ಇಂಡಿಯಾ ತಂಡಕ್ಕೆ ಕಾಡುತ್ತಿದ್ದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮಯಾಂಕ್ ಅಗರವಾಲ್ ಅದ್ಭುತ ಪ್ರದರ್ಶನ ನೀಡಿದ್ದು, ಇದು ಅವರಲ್ಲಿರುವ ಪ್ರತಿಭೆಯನ್ನ ತೋರಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳು ಉತ್ತಮ ರನ್ ಗಳಿಕೆ ಮಾಡಿಕೊಂಡಿದ್ದಾರೆ. ಆದರೆ ಆರಂಭಿಕರು ಮಾತ್ರ ವೈಫಲ್ಯ ಅನುಭವಿಸಿದ್ದಾರೆ. ಈ ನಡುವೆಯೂ ಕೂಡಾ ಮಯಾಂಕ್ ಅದ್ಭುತ ಪ್ರದರ್ಶನ ತೋರಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
ಅಂತೆಯೇ ನಾನು ಮುಂಬರುವ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ. ಅದು ಆರಂಭಗೊಳ್ಳಲು ಸಮಯವಕಾಶವಿದ್ದು, ಆ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕೆಲ ಯುವ ಪ್ರತಿಭೆಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.