ಮುಂಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಹೀರೋ ಆಗಿದ್ದ 'ಬೇಬಿ ಸಿಟ್ಟರ್' ಖ್ಯಾತಿಯ ರಿಷಬ್ ಪಂತ್ ಗೆ ಅದೃಷ್ಟ ಖುಲಾಯಿಸಿದ್ದು, ಮುಂಬರುವ 2019ರ ವಿಶ್ವಕಪ್ ಟೂರ್ನಿಗೆ ಅವರ ಆಯ್ಕೆ ಖಚಿತವಾಗಿದೆ.
ಟೀಂ ಇಂಡಿಯಾದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಸದ್ಯ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಹಾಗೂ ಓರ್ವ ಬ್ಯಾಟ್ಸ್ಮನ್ ಆಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇದರ ಮಧ್ಯೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಿಗೆ ಆಯ್ಕೆಯಾಗದ ಕಾರಣ 2019ರ ಏಕದಿನ ವಿಶ್ವಕಪ್ನಿಂದ ಹೊರಬೀಳಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಮಾತುಗಳನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಸುಳ್ಳು ಮಾಡಿದೆ.
ಈ ಬಗ್ಗೆ ಸ್ವತಃ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವಿಶ್ವಕಪ್ ಟೂರ್ನಿಗೆ ಮೂವರು ವಿಕೆಟ್ ಕೀಪರ್ ಬ್ಯಾಟ್ಸಮನ್ ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 'ರಿಷಬ್ ಪಂತ್ ಖಂಡಿತವಾಗಿ 2019ರ ವಿಶ್ವಕಪ್ ನಲ್ಲಿ ನಮ್ಮ ಯೋಜನೆಯ ತಂಡದ ಭಾಗವಾಗಲಿದ್ದು, ಮುಂಬರುವ ಸರಣಿಗಳಲ್ಲಿ ಅವರ ಆಯ್ಕೆ ಮಾಡಿಲ್ಲ ಎಂಬ ಕಾರಣದಿಂದ ಈ ರೀತಿ ವಿಚಾರ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ. ಅಂತೆಯೇ ಈಗಾಗಲೆ ವಿಶ್ವಕಪ್ ಗಾಗಿ ಮೂವರು ವಿಕೆಟ್ ಕೀಪರ್ ಗಳನ್ನು ಅಯ್ಕೆ ಮಾಡುವ ಯೋಚನೆಯಲ್ಲಿದ್ದು, ಈ ಪೈಕಿ ಎಂಎಸ್ ಧೋನಿ ನಮ್ಮ ಮೊದಲ ಆಯ್ಕೆಯಾಗಿರುತ್ತದೆ. ಬಳಿತ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇರಲಿದ್ದಾರೆ ಎಂದು ಹೇಳಿದ್ದಾರೆ.
ಪಂತ್ ಆಯ್ಕೆಯಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ನಾವು ಆಯ್ಕೆ ಮಾಡಬೇಕೆಂದಿರುವ ಮೂರು ವಿಕೆಟ್ ಕೀಪರ್ ಗಳು ಪ್ರಸ್ತುತ ಕ್ರಿಕೆಟ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಏಕದಿನ ಸರಣಿಗಾಗಿ ಧೋನಿ ಮೇಲೆ ನಾವು ವಿಶ್ವಾಸವನ್ನಿಟ್ಟುಕೊಂಡು ಅವಕಾಶ ನೀಡಲಾಗಿದ್ದು, ಅವರಿಗೆ ದಿನೇಶ್ ಕಾರ್ತಿಕ್ ಸಾಥ್ ನೀಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರಿಷಬ್ ಪಂತ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ನಿರ್ವಹಿಸಿದ್ದು, ಅದಕ್ಕೂ ಮುನ್ನ ಟಿ20 ಆಸೀಸ್ ಸರಣಿಯಲ್ಲೂ ಆಡಿರುವ ಕಾರಣ, ವಿಶ್ರಾಂತಿ ಅಗತ್ಯವಿದ್ದು, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಡ್ನಿ ಟೆಸ್ಟ್ ಪಂದ್ಯ ಪಂತ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹೊಸ ತಿರುವು ನೀಡಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.
ಈಗಾಗಲೇ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಕೂಡ ರಿಷಭ್ ಪಂತ್ ಗುಣಗಾಣ ಮಾಡಿದ್ದು, 2019ರ ವಿಶ್ವಕಪ್ನಲ್ಲಿ ಪಂತ್ ಟೀಂ ಇಂಡಿಯಾ ಪರ ಪಂದ್ಯವನ್ನು ಗೆಲ್ಲಿಸಿ ಕೊಡುವ ಆಟಗಾರನಾಗಿದ್ದು, ಆತನಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವಂತೆ ಆಯ್ಕೆ ಸಮಿತಿ ಬಳಿ ತಿಳಿಸುವೆ ಎಂದು ಈ ಹಿಂದೆ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜನವರಿ 12ರಿಂದ ಆರಂಭಗೊಳ್ಳಲಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕುಲ್ ದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ