ಲಂಡನ್: ಹಾಲಿ ವಿಶ್ವಕಪ್ ನಲ್ಲೂ ಫೈನಲ್ ಪ್ರವೇಶ ಮಾಡುವ ಭಾರತದ ಕನಸಿಗೆ ನ್ಯೂಜಿಲೆಂಡ್ ತಂಡ ತಣ್ಣೀರೆರಚಿದ್ದು, ಇಡೀ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ತಿರುವು ತಂದಿದ್ದು ಒಂದೇ ಒಂದು ರನೌಟ್..
ಹೌದು.. ನ್ಯೂಜಿಲೆಂಡ್ ನೀಡಿದ್ದ 240 ರನ್ ಗಳ ಸಾಮಾನ್ಯ ಗುರಿ ಅಕ್ಷರಸಃ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತ್ತು, ಪ್ರಮುಖವಾಗಿ ಭಾರತ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟ್ ಆಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಬಳಿಕ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 32 ರನ್ ಗಳಿಸಿ ತಂಡಕ್ಕೆ ನೆರವಾದರಾದರೂ, ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಅನಾವಶ್ಯಕ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿದ್ದು, ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಈ ಹಂತದಲ್ಲಿ ಭಾರತ ತಂಡ ಕೇವಲ 92 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಅಕ್ಷರಶಃ ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹೊತ್ತಿನಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಜೋಡಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆರಂಭದಿಂದಲೂ ಜಡೇಜಾ ಸ್ಫೋಟಕ ಆಟಕ್ಕೆ ಮುಂದಾದರೆ, ಧೋನಿ ತಮ್ಮ ಎಂದಿನ ತಾಳ್ಮೆಯ ಆಟಕ್ಕೆ ಅಂಟಿಕೊಂಡಿದ್ದರು. ನೋಡ ನೋಡುತ್ತಲೇ ಈ ಜೋಡಿ ಶತಕದ ಜೊತೆಯಾಟವಾಡಿತು.
ಜಡೇಜಾ ಅರ್ಧ ಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರೆ ಧೋನಿ 35 ರನ್ ಗಳಿಸಿ ನಿಧಾನವಾಗಿ ಅರ್ಧಶತಕದತ್ತ ನಡೆಯುತ್ತಿದ್ದರು. ಭಾರತದ ಇನ್ನಿಂಗ್ಸ್ ನ 48ನೇ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 15 ಎಸೆತಗಳಲ್ಲಿ 33 ರನ್ ಗಳ ಅವಶ್ಯಕತೆ ಇದ್ದಾಗ ಬೌಲ್ಟ್ ಎಸೆದ 5ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಜಡೇಜಾ ಲೆಕ್ಕಾಚಾರ ತಪ್ಪಾಗಿ ಚೆಂಡು ಬ್ಯಾಟ್ ನ ಅಂಚಿಗೆ ತಾಗಿ ಕೇನ್ ವಿಲಿಯ್ಸಮನ್ ಕೈ ಸೇರಿತ್ತು. ಅದರೊಂದಿಗೆ ನ್ಯೂಜಿಲೆಂಡ್ ಗೆಲುವಿನ ಕನಸು ಚಿಗುರೊಡೆದಿದ್ದು ಮಾತ್ರವಲ್ಲ ಜಡೇಜಾರ ಅದ್ಭುತ ಇನ್ನಿಂಗ್ಸ್ ಗೂ ಕೊನೆ ಬಿತ್ತು.
ಆದರೆ ಪಂದ್ಯದ ಹೈಡ್ರಾಮಾ ಅಷ್ಟಕ್ಕೇ ಅಂತ್ಯವಾಗಿರಲಿಲ್ಲ. ಕ್ರೀಸ್ ನಲ್ಲಿದ್ದ ಧೋನಿ ಮೇಲೆ ಸಂಪೂರ್ಣ ಜವಾಬ್ದಾರಿ ಬಿದ್ದಿತ್ತು. ಅಂತೆಯೇ ಜವಾಬ್ದಾರಿ ಹೊತ್ತ ಧೋನಿ ಕೂಡ ಭಾರಿ ಹೊಡೆತಕ್ಕೆ ಮುಂದಾಗಲು ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲು ಮುಂದಾದರು.