ಲಂಡನ್: ನ್ಯೂಜಿಲೆಂಡ್ ವಿರುದ್ಧ 45 ನಿಮಿಷಗಳ ಕೆಟ್ಟ ಆಡ ಇಡೀ ಪಂದ್ಯವನ್ನೇ ನಮ್ಮಿಂದ ಕಸಿಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18ರನ್ ಗಳ ವಿರೋಚಿತ ಸೋಲು ಕಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ಕೊಹ್ಲಿ, ತಂಡದ ಸೋಲಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಟೂರ್ನಿಯಲ್ಲಿ ಭಾರತ ಸೋಲು ಕಾಣಲು ಮೊದಲ 45 ನಿಮಿಷಗಳ ಆಟವೇ ಕಾರಣ. ಪಂದ್ಯದ ಆರಂಭದಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಪಂದ್ಯವನ್ನು ಕೈಚೆಲ್ಲಿದ್ದೇವೆ. ನಿಜಕ್ಕೂ ಮೊದಲ 45 ನಿಮಿಷಗಳ ಆಟದಲ್ಲಿ ಕೊಂಚ ಜಾಗರೂಕರಾಗಿದಿದ್ದರೆ, ಬಹುಶಃ ಫಲಿತಾಂಶ ಬೇರೆ ರೀತಿ ಇರುತ್ತಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ರವೀಂದ್ರ ಜಡೇಜಾ ಬ್ಯಾಟಿಂಗ್ ಕುರಿತು ಮಾತನಾಡಿದ ಕೊಹ್ಲಿ, 'ಜಡೇಜಾ ಕಳೆದ ಎರಡು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಧೋನಿ ಮತ್ತು ಅವರ ಪಾರ್ಟನರ್ಶಿಪ್ ಚೆನ್ನಾಗಿತ್ತು. ಆದರೆ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳ ವೈಫಲ್ಯವೇ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಿದರು. ಇದೇ ವೇಳೆ ಮಹೇಂದ್ರ ಸಿಂಗ್ ಧೋನಿಯ ಕ್ರಿಕೆಟ್ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ಧೋನಿ ತಮ್ಮ ನಿವೃತ್ತಿಯ ಬಗ್ಗೆ ನಮ್ಮ ಬಳಿಯಾಗಲಿ, ತಂಡದ ಆಟಗಾರರ ಬಳಿಯಾಗಲಿ ಚರ್ಚೆಸಿಲ್ಲ. ವಿಶ್ವಕಪ್ ಬಳಿಕ ಅವರ ಮುಂದಿನ ಆಯ್ಕೆ ಏನು ಎಂಬುದು ನಮಗೆ ತಿಳಿದಿಲ್ಲ ಎಂದಿದ್ದಾರೆ.