ಪಶ್ಚಿಮ ಬಂಗಾಳ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಭಾರತ ಟೂರ್ನಿಯಿಂದ ನಿರ್ಗಮಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರ ಕನಸು ಭಗ್ನಗೊಂಡಂತಾಗಿದೆ.
ಈ ಮಧ್ಯೆ ಪಶ್ಟಿಮ ಬಂಗಾಳದಲ್ಲಿ ದುರಂತವೊಂದು ನಡೆದಿದೆ. ಸೆಮಿ ಫೈನಲ್ ನಲ್ಲಿ ಎಂಎಸ್ ಧೋನಿ ರನೌಟ್ ಆಗುತ್ತಿದ್ದಂತೆ 33 ವರ್ಷದ ಯುವಕನೋರ್ವನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಮೃತನನ್ನು ಸೈಕಲ್ ಶಾಪ್ ಮಾಲೀಕ ಶ್ರೀಕಾಂತ್ ಮೈಟಿ ಎಂದು ಗುರುತಿಸಲಾಗಿದೆ. ಮೊಬೈಲ್ ಪೋನ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಶ್ರೀಕಾಂತ್, ಧೋನಿ ರನೌಟ್ ಆಗುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಕುಸಿದು ಬಿದ್ದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದಾಗ ಆತ ಮೊದಲನೇ ಮಹಡಿಯಲ್ಲಿ ಪ್ರಜ್ಞೆ ತಪ್ಪಿ ಬಿದಿದ್ದ. ನಂತರ ಕಾನಾಕುಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದರು ಎಂದು ಸ್ವೀಟ್ ಶಾಪ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಬಿಹಾರದಲ್ಲಿಯೂ ಮತ್ತೊಂದು ದುರದೃಷ್ಟಕರ ಘಟನೆ ನಡೆದಿದೆ. ಸೆಮಿಫೈನಲ್ ಪಂದ್ಯ ವೀಕ್ಷಿಸುತ್ತಿದ್ದ ಬಿಹಾರದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.ಉಸಿರಾಟ ನಿಂತಾಗ ಆತನನ್ನು ಕುಟುಂಬ ಸದಸ್ಯರೆಲ್ಲರೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸೆಮಿಫೈನಲ್ ಪಂದ್ಯದಿಂದ ಆಘಾತಗೊಂಡು ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಒಡಿಶಾದ ಕಲಾಹಂದಿಯಲ್ಲಿ ಟೀಂ ಇಂಡಿಯಾ ಸೋತ ಬಳಿಕ ವಿಷ ಸೇವಿಸಿ ಕ್ರಿಕೆಟ್ ಅಭಿಯಾನಿಯೊಬ್ಬರು ಮೃತಪಟ್ಟಿದ್ದಾರೆ. ಆರಂಭಿಕ ಬ್ಯಾಟ್ಸಮನ್ ಗಳ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತವಾಯಿತು.
ರವೀಂದ್ರ ಜಡೇಜಾ ಹಾಗೂ ಧೋನಿ ಅವರ ಶತಕ ಜೊತೆಯಾಟದ ಹೊರತಾಗಿಯೂ ವಿಕೆಟ್ ಗಳು ಒಂದಾದ ಮೇಲೆ ಒಂದಂತೆ ಬೀಳುತ್ತಾ ಹೋದರಿಂದ ಟೀಂ ಇಂಡಿಯಾ ಸೋಲಿಗೆ ಶರಣಾಗುವಂತಾಯಿತು.