ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಟೀಂ ಇಂಡಿಯಾ ಸುದ್ದಿಗೋಷ್ಠಿಗೆ ಮಾಧ್ಯಮಗಳ ಬಹಿಷ್ಕಾರ! ಕಾರಣ ಗೊತ್ತಾ?

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಭಾಗವಹಿಸಿದ್ದ ಸುದ್ದಿಗೋಷ್ಠಿಗೆ ಮಾಧ್ಯಮಗಳು ಬಹಿಷ್ಕಾರ ಹಾಕಿದ್ದ ಘಟನೆ ನಡೆದಿದೆ.
ಹೌದು.. ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಟೀಂ ಇಂಡಿಯಾ ಪಂದ್ಯದ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ಆಟಗಾರರು ಸುದ್ದಿಗೋಷ್ಠಿಗೆ ಹಾಜರಾದರೂ ಸುದ್ದಿಗೋಷ್ಠಿಯಲ್ಲಿ ಯಾವುದೇ ಪತ್ರಕರ್ತರು, ವರದಿಗಾರರು ಇರಲಿಲ್ಲ. ಟೀಂ ಇಂಡಿಯಾ ಸುದ್ದಿಗೋಷ್ಠಿಗೆ ಮಾಧ್ಯಮಗಳು ಬಹಿಷ್ಕಾರ ಹೇರಿದ್ದವು ಎನ್ನಲಾಗಿದೆ.
ಮಾಧ್ಯಮಗಳ ಬಹಿಷ್ಕಾರಕ್ಕೆ ಕಾರಣವೇನು?
ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಸುದ್ದಿಗಾರರು ಮತ್ತು ಮಾಧ್ಯಮ ಸಿಬ್ಬಂದಿಗಳು ಟೀಂ ಇಂಡಿಯಾ ಆಟಗಾರರೊಂದಿಗೆ ಸಂವಾದ ನಡೆಸಬೇಕಿತ್ತು. ಹೀಗಾಗಿ ಸುದ್ಜಿಗೋಷ್ಠಿ ಆಯೋಜನೆಯಾಗಿತ್ತು. ಆದರೆ ಸುದ್ದಿಗೋಷ್ಠಿಗೆ ತಂಡದ ಪ್ರಮುಖ ಆಟಗಾರರು, ತಂಡದ ನಾಯಕ ಅಥವಾ ತಂಡದ ತರಬೇತು ದಾರರು ಹಾಜರಾಗಬೇಕಿತ್ತು. ಆದರೆ ತಂಡದ ನಿರ್ವಹಣಾ ಮಂಡಳಿ ಪ್ರಮುಖ ಆಟಗಾರರನ್ನಲ್ಲದೇ ತಂಡದ ಬೆಂಚ್ ಸ್ಟ್ರೆಂಥ್ ಆಟಗಾರರಾದ ಆವೇಶ್ ಖಾನ್, ದೀಪಕ್ ಚಹಾರ್ ಮತ್ತು ಖಲೀಲ್ ಅಹ್ಮದ್ ರನ್ನು ಸುದ್ದಿಗೋಷ್ಟಿಗೆ ಕಳುಹಿಸಿದೆ.
ಟೀಂ ಇಂಡಿಯಾ ನಿರ್ವಾಹಕರ ಈ ನಡೆಯಿಂದ ತೀವ್ರ ಅಸಮಾಧಾನಗೊಂಡ ಸುದ್ದಿಗಾರರು ಇಡೀ ಸುದ್ದಿಗೋಷ್ಟಿಯನ್ನೇ ಬಹಿಷ್ಕರಿಸಿದ್ದಾರೆ. ಅಲ್ಲದೆ ಪ್ರಮುಖ ಆಟಗಾರರನ್ನು ಕಳುಹಿಸದ ತಂಡದ ಆಡಳಿತ ಮಂಡಳಿ ನಡೆ ಬಗ್ಗೆ ಟೀಕೆ ಮಾಡಿದ್ದಾರೆ.
ಇನ್ನುಈ ಬಗ್ಗೆ ಟೀಂ ಇಂಡಿಯಾ ಆಡಳಿತ ಮಂಡಳಿ ಕೂಡ ಸ್ಪಷ್ಟನೆ ನೀಡಿದ್ದು, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇನ್ನೂ ಒಂದೇ ಒಂದು ಪಂದ್ಯವನ್ನೂ ಕೂಡ ಆಡಿಲ್ಲ. ಹೀಗಾಗಿ ತಂಡದ ಪ್ರಮುಖ ಆಟಗಾರರು ಕೋಚ್ ಮತ್ತು ಆಡಳಿತ ಸಿಬ್ಬಂದಿ ಯಾವುದೇ ರೀತಿಯ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳದಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. 
2015ರ ವಿಶ್ವಕಪ್ ಟೂರ್ನಿಯಲ್ಲಿ ಸುದ್ದಿಗಾರರ ಆಕ್ರೋಶಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ
ಇನ್ನು 2015ರ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿತ್ತು. ಟೂರ್ನಿಯ ಪ್ರತೀ ಪಂದ್ಯದ ಬಳಿಕ ತಂಡದ ನಾಯಕ ಎಂಎಸ್ ಧೋನಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಅಂದು ಸುದ್ದಿಗಾರರು ಆಯಾ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನೂ ಸುದ್ದಿಗೋಷ್ಠಿಗೆ ಬರಬೇಕು ಎಂದು ಆಗ್ರಹಿಸಿದ್ದರು. ಆದರೆ ತಂಡದ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. 
SCROLL FOR NEXT