ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲೂ ಚೆಂಡು ವಿರೂಪಗೊಳಿಸಿದ ಗಂಭೀರ ಆರೋಪ ಕೇಳಿಬರುತ್ತಿದ್ದು, ಅದೂ ಕೂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ...
ಹೌದು.. ಇಂದು ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸಿಸ್ ಬೌಲರ್ ಆ್ಯಡಂ ಜಂಪಾ ಅವರ ಒಂದು ಸಂಶಾಸ್ಪದ ನಡೆ ಇಂತಹ ಗಂಭೀರ ಆರೋಪಕ್ಕೆ ಕಾರಣವಾಗಿದೆ.
ಭಾರತದ ಇನ್ನಿಂಗ್ಸ್ 24ನೇ ಓವರ್ ನ ಆರಂಭಕ್ಕೂ ಮುನ್ನ ಆ್ಯಡಂ ಜಂಪಾ ಚೆಂಡನ್ನು ತೆಗೆದುಕೊಂಡು ಜೇಬಿನಲ್ಲಿ ಕೈ ಹಾಕಿಕೊಂಡರು. ಬಹುಶಃ ಒಂದು ಬಾರಿ ಅವರು ಈ ರೀತಿ ಮಾಡಿದ್ದರೆ ವೀಕ್ಷಕರಿಗೆ ಶಂಕೆ ಮೂಡುತ್ತಿರಲಿಲ್ಲ. ಆದರೆ ಜಂಪಾ ಸತತ ಎರಡೆರಡು ಬಾರಿ ಜೇಬಿಗೆ ಕೈ ಹಾಕಿ ಬಳಿಕ ಬಲನ್ನು ಕೈಯಿಂದ ತಿಕ್ಕಿದ್ದಾರೆ. ಇದು ವೀಕ್ಷಕರಿಗೆ ಶಂಕೆ ಮೂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಂಪಾ ಮತ್ತು ಆಸ್ಟ್ರೇಲಿಯಾ ತಂಡದ ವಿರುದ್ಧ ವ್ಯಾಪಕ ಟೀಕೆ ಮತ್ತು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಟ್ವೀಟಿಗರು ಆರೋಪಿಸಿರುವಂತೆ ಜಂಪಾರ ಈ ಶಂಕಾಸ್ಪದ ನಡವಳಿಕೆ ಬಳಿಕ ಚೆಂಡು ಸತತ 2 ಓವರ್ ಪುಟಿಯುತ್ತಿತ್ತು. ಅಲ್ಲದೆ ಅಲ್ಲಿಯವರೆಗೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಧವನ್ ಗೂ ಕೂಡ ದೊಡ್ಡ ಹೊಡೆತಗಳನ್ನು ಗಳಿಸಲು ಕಷ್ಟವಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಇನ್ನುಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸಿಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಡೇವಿಡಾ ವಾರ್ನರ್ ವಿಶ್ವಕಪ್ ಟೂರ್ನಿಯಿಂದ ತಂಡ ಸೇರ್ಪಡೆಯಾಗಿದ್ದಾರೆ. ಟೂರ್ನಿಯಲ್ಲಿ ಆಸಿಸ್ ತಂಡ 2 ಪಂದ್ಯಗಳನ್ನಾಡಿದ್ದು ಇಂದು ಭಾರತದ ವಿರುದ್ಧ ಮೂರನೇ ಪಂದ್ಯವನ್ನಾಡುತ್ತಿದೆ. ಇಂತಹ ಹೊತ್ತಲ್ಲಿ ಮತ್ತೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬರುತ್ತಿದೆ.