ಕ್ರಿಕೆಟ್

ಆಸೀಸ್‌ ವಿರುದ್ಧ ಸೋತಿದ್ದು ಭಾರತಕ್ಕೆ ಎಚ್ಚರಿಕೆ ಘಂಟೆ: ದ್ರಾವಿಡ್

Srinivas Rao BV
ಮುಂಬೈ: ತವರು ನೆಲದಲ್ಲಿ ಮುಕ್ತಾಯವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ 2-3 ಅಂತರದಲ್ಲಿ ಸೋಲು ಅನುಭವಿಸಿರುವುದು ಮುಂಬರುವ ಐಸಿಸಿ ವಿಶ್ವಕಪ್‌ಗೆ ಇನ್ನಷ್ಟು ತಯಾರಿ ನಡೆಯುವಂತೆ ಮುನ್ಸೂಚನೆ ಇದಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. 
ಕಾಂಗೂರು ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಳ ಐತಿಹಾಸಿಕ ಜಯದ ಬಳಿಕ ತವರಿಗೆ ಹಿಂದಿರುಗಿದ್ದ ಭಾರತ, ಐದು ಪಂದ್ಯಗಳ ಸರಣಿಯ, ಮೊದಲ ಎರಡು ಹಣಾಹಣಿಗಳಲ್ಲಿ 2-0 ಮುನ್ನಡೆ ಸಾಧಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಆಸೀಸ್, ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು. 
“ಸುಲಭವಾಗಿ ಐಸಿಸಿ ವಿಶ್ವಕಪ್ ಗೆಲ್ಲುತ್ತೇವೆ ಎಂದು ಹೇಳುವುದು ಬರೀ ಕಲ್ಪನೆಯಷ್ಟೆ. ಇದು ಸಾಬೀತಾದರೆ ಒಳ್ಳೆಯದು. ಆದರೆ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿರುವುದನ್ನು ಮರೆಯಬಾರದು. ಜಾಗತಿಕ ಕ್ರಿಕೆಟ್‌ನ ಶ್ರೇಷ್ಠ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಲೇಬೇಕು”  ಎಂದು ಕ್ರಿಕೆಟ್‌ ದಿಗ್ಗಜ ಸಂಜಯ್ ಮಂಜೇರ್ಕರ್ ಅವರ ಜತೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 
“ಕಳೆದ ಹಲವು ವರ್ಷಗಳಿಂದ ಭಾರತ ತಂಡ ಉತ್ತಮ ಪ್ರದರ್ಶನ ತೋರಿದೆ. ಆದ್ದರಿಂದ ಐಸಿಸಿ ಶ್ರೇಯಾಂಕದಲ್ಲೂ ಉತ್ತಮ ಸ್ಥಾನದಲ್ಲಿದೆ. ಇದರ ಆಧಾರದ ಮೇಲೆ ಭಾರತ ವಿಶ್ವಕಪ್ ಗೆಲುವಿನ ಹಾದಿ ಸುಗಮವಾಗಲಿದೆ. ಈ ನಿಟ್ಟಿನಲ್ಲಿ ಆಟಗಾರರು ಸಾಕಷ್ಟು ಎಚ್ಚರಿಕೆಯಿಂದ ಆಡಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
“ಭಾರತ ತಂಡದ ಪಂದ್ಯಗಳನ್ನು ವೀಕ್ಷಿಸಿದ್ದು, ತಂಡದ ಸಾಮರ್ಥ್ಯದ ಬಗ್ಗೆ ವಿಚಿತ್ರ ದೃಷ್ಟಿಕೋನದಿಂದ ಉಲ್ಲೇಖಿಸುವುದು ತಪ್ಪು. ಉತ್ತಮ ಲಯದಲ್ಲಿರುವ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಪ್ರಶಸ್ತಿ ಗೆಲ್ಲುವ ಹಾದಿ ಕಠಿಣವಾಗಿದೆ. ಇದು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ.
SCROLL FOR NEXT