ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಇಂದು ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದ್ದರೆ ಇತ್ತ ಮುಂಬೈ ತಂಡದ ಯುವ ಕ್ರಿಕೆಟಿಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಮುಂಬೈ ಮೂಲದ ಕ್ರಿಕೆಟಿಗ ವಿನೋದ್ ಚೌಗುಲೆ ಹಾಗೂ ಆತನ ತಾಯಿಯ ಶರೀರವು ಮನೆಯಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.
25 ವರ್ಷದ ವಿನೋದ್ ಮುಂಬೈ ಸಬಾ ಕ್ರಿಕೆಟ್ ಅಕಾಡೆಮಿಯ ಅತ್ಯುತ್ತಮ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ಸಬಾ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ವಿನೋದ್ ಉತ್ತಮ ಫಾರ್ಮ್ ನಲ್ಲಿದ್ದರು. ಹೀಗಾಗಿ ಈ ಬಾರಿಯ ರಣಜಿ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಮುಂಜಾನೆ ತಮ್ಮ ಮನೆಯಲ್ಲಿ ವಿನೋದ್ ಹಾಗೂ ತಾಯಿ ಸಂಜೀವಿನ ಅವರ ಮೃತದೇಹಗಳು ಪತ್ತೆಯಾಗಿವೆ.
ತಾಯಿ ಹಾಗೂ ವಿನೋದ್ ತಂದೆಯಿಂದ ದೂರವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿ ವಿನೋದ್ ಹೆಗಲೇರಿತ್ತು ಎನ್ನಲಾಗಿತ್ತು. ಆದರೆ ಕುಟುಂಬ ನಿರ್ವಹಣೆಗೆ ಯುವ ಕ್ರಿಕೆಟಿಗ ಪರ್ಯಾಯ ಮಾರ್ಗವನ್ನು ಕಂಡುಕೊಂಡಿರಲಿಲ್ಲ. ಇನ್ನು ಹಲವರಿಂದ ವಿನೋದ್ ಸಾಲವನ್ನು ಪಡೆದುಕೊಂಡಿರ್ರು ಅನ್ನಲಾಗಿದೆ.