ಕ್ರಿಕೆಟ್

ಕೇದಾರ್‌ ಜಾಧವ್‌ ಫಿಟ್, ಟೀಂ ಇಂಡಿಯಾ ಆಟಗಾರರಲ್ಲಿ ಬದಲಾವಣೆ ಇಲ್ಲ: ಬಿಸಿಸಿಐ

Raghavendra Adiga
ನವದೆಹಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಲ್‌ರೌಂಡರ್‌ ಕೇದಾರ್‌ ಜಾದವ್‌ ಸಂಪೂರ್ಣ ಫಿಟ್‌ ಆಗಿದ್ದು,  ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸುವ 15 ಆಟಗಾರರ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.  
ಕಳೆದ ಕೆಲವು ದಿನಗಳ ಹಿಂದೆ ಭಾರತ ತಂಡದ ಫಿಜಿಯೋಥೆರಪಿಸ್ಟ್‌ ಪ್ಯಾಟ್ರಿಕ್‌ ಫರ್ಹಾತ್‌ ಅವರು ಕೇದಾರ್‌ ಜಾದವ್‌ ಅವರ ಫಿಟ್ನೆಸ್‌ ಬಗ್ಗೆ ಅಂತಿಮ ವರದಿ ಸಲ್ಲಿಸಿದ್ದರು. ಅದರಂತೆ 34ರ ಪ್ರಾಯದ ಜಾದವ್‌ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವೇಳೆ ತಮ್ಮ ಭುಜದಲ್ಲಿ ಯಾವುದೇ ನೋವು ಕಾಣಿಸಿಕೊಂಡಿರಲಿಲ್ಲ ಎಂದು ಆಯ್ಕೆದಾರರಿಗೆ ಮನವರಿಕೆ ಮಾಡಲಾಯಿತು. ಇದನ್ನು ಪರಿಗಣಿಸಿ ಬಿಸಿಸಿಐ ಆಯ್ಕೆ ಸಮಿತಿ ಕೇದಾರ್‌ ಜಾಧವ್‌ ಅವರನ್ನು ತಂಡಕ್ಕೆ ಅಂತಿಮಗೊಳಿಸಿದ್ದಾರೆ. 
ಮೇ ಮೊದಲ ವಾರದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇದಾರ್‌ ಜಾಧವ್‌ ತನ್ನ ಎಡಗೈ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ತಕ್ಷಣ ಅವರು ಅಂಗಳದಿಂದ ಹೊರ ನಡೆದಿದ್ದರು. ನಂತರ ಇನ್ನುಳಿದ ಐಪಿಎಲ್‌ ಪಂದ್ಯಗಳಿಂದ ಅವರು ದೂರ ಉಳಿದಿದ್ದರು. 
ಕೇದಾರ್ ಜಾಧವ್‌ ಬದಲಿಗೆ ಬದಲಿ ಆಟಗಾರನನ್ನು ಬಿಸಿಸಿಐ ಗುರುತಿಸಿರಲಿಲ್ಲ. ನಿಗದಿತ ಸಮಯದಲ್ಲಿ ಕೇದಾರ್‌ ಜಾಧವ್‌ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಒಂದು ವೇಳೆ ಜಾಧವ್‌ ಚೇತರಿಕೆ ಕಾಣದೆ ವಿಫಲವಾಗಿದ್ದೇ ಆದಲ್ಲಿ ಸ್ಟಾಂಡ್‌ ಬೈನಲ್ಲಿರುವ ರಿಷಭ್‌ ಪಂತ್‌, ಅಂಬಾಟಿ ರಾಯುಡು, ಇಶಾಂತ್‌ ಶರ್ಮಾ, ಅಕ್ಷರ್‌ ಪಟೇಲ್‌ ಹಾಗೂ ನವದೀಪ್‌ ಸೈನಿ ಅವರಲ್ಲಿ ಒಬ್ಬರನ್ನು ಆರಿಸಲಾಗುತ್ತಿತ್ತು.
SCROLL FOR NEXT