ನವದೆಹಲಿ: ಕೆಲವೊಮ್ಮೆ ಅದೃಷ್ಟದ ಬಾಗಿಲು ನೋಬಾಲ್ ಮೂಲಕವೂ ತೆರೆದುಕೊಳ್ಳುತ್ತದೆ. ನಾನು ವಿಶ್ವಕಪ್ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ನೋಬಾಲ್ ಕಾರಣವಾಗಿತ್ತು ಎಂದು ವಿಜಯ್ ಶಂಕರ್ ಹೇಳಿದ್ದಾರೆ.
ಆಲ್ರೌಂಡರ್ ವಿಜಯ್ ಶಂಕರ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಈ ಮಧ್ಯೆ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಪ್ರಮುಖ ಘಟ್ಟ ಇದು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ಶಂಕರ್ ಅವರು ತಾವು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಕಳೆದ ಐಪಿಎಲ್ ನಲ್ಲಿ ಚೆನ್ನೈ ಪರ ಆಡಿದ್ದ ನಾನು ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಲ್ಡ್ ಆಗಿದ್ದೆ. ಆದರೆ ಅದು ನೋಬಾಲ್ ಆಗಿತ್ತು. ಹೀಗಾಗಿ ಒಂದು ಲೈಫ್ ಪಡೆದ ನಾನು ಅಂದಿನ ಪಂದ್ಯದಲ್ಲಿ 95 ರನ್ ಸಿಡಿಸಿದ್ದೆ. ಈ ಪಂದ್ಯದ ಆಟ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರು.
ಒಂದು ವೇಳೆ ಶಾರ್ದೂಲ್ ಠಾಕೂರ್ ಎಸೆದ ಚೆಂಡು ನೋಬಾಲ್ ಆಗದಿದ್ದಿದ್ದರೆ ನನ್ನ ಕ್ರಿಕೆಟ್ ವೃತ್ತಿ ಬದುಕು ಕೊಂಚ ಮಂಕಾಗುತ್ತಿತ್ತು. ಇದಕ್ಕೆ ಕಾರಣ ನಾನು ರಣಜಿಯಲ್ಲಿ ತಮಿಳುನಾಡು ಪರ ಆಡಿದ್ದೆ. ಒಂದು ಪಂದ್ಯದಲ್ಲಿ ನಾನು ರನೌಟ್ ಆಗಿದ್ದರ ಪರಿಣಾಮ ಅಂದಿನ ಪಂದ್ಯ ನಮ್ಮ ತಂಡ ಸೋಲುವಂತಾಯಿತು. ಇದರಿಂದ ಕೆಲವರು ಮುಂದಿನ ಪಂದ್ಯದಲ್ಲಿ ನನಗೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಮಾತನಾಡಲು ಶುರು ಮಾಡಿದ್ದರು ಎಂದು ಹೇಳಿದ್ದಾರೆ.