ಲಂಡನ್: ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾದರೂ, ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ. ನನ್ನ ಪ್ರಕಾರ ಕೊಹ್ಲಿಗೆ ಧೋನಿ ಅತ್ಯಮೂಲ್ಯ ಎಂದು ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಲಂಡನ್ ನಲ್ಲಿ ಅಭ್ಯಾಸ ಪಂದ್ಯಗಳೂ ಕೂಡ ಆರಂಭವಾಗಿವೆ. ಟೂರ್ನಿ ಆರಂಭಕ್ಕೆ ತುದಿಗಾಲಲ್ಲಿ ನಿಂತಿರುವ ಟೀಂ ಇಂಡಿಯಾ ಈ ಮಹತ್ವದ ಟೂರ್ನಿಗೆ ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಇನ್ನು ಈ ಕುರಿತು ಮಾತನಾಡಿರುವ ತಂಡದ ಸಹ ಆಟಗಾರ ಸುರೇಶ್ ರೈನಾ, ತಂಡದ ಮಟ್ಟಿಗೆ ಹಾಲಿ ವಿಶ್ವಕಪ್ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತಂಡ ಕೂಡ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರದ ಕುರಿತು ಮಾತನಾಡಿದ ರೈನಾ, ತಂಡಕ್ಕೆ ಕೊಹ್ಲಿ ನಾಯಕನಾದರೂ, ವಿರಾಟ್ ಗೆ ಎಂಎಸ್ ಧೋನಿಯೇ ನಾಯಕ ಎಂದು ಹೇಳುವ ಮೂಲಕ ಧೋನಿ ತಂಡಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದಾರೆ.
'ಪೇಪರ್ ನಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾದರೂ ಆನ್ ಫೀಲ್ಡ್ ನಲ್ಲಿ ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿ ಅವರೇ ನಾಯಕ. ತಂಡದಲ್ಲಿ ಧೋನಿ ನಾಯಕರಾಗಿದ್ದಾಗ ಅವರ ಪಾತ್ರ ಏನಿತ್ತೋ ಇಂದಿಗೂ ಧೋನಿಗೆ ಅದೇ ಪ್ರಮುಖ ಪಾತ್ರವಿದೆ. ವಿಕೆಟ್ ಹಿಂದೆ ನಿಂತೇ ಧೋನಿ ತತ್ ಕ್ಷಣದ ಪರಿಸ್ಥಿತಿಗೆ ತಕ್ಕಂತೆ ತಂಡದಲ್ಲಿ ಬದಲಾವಣೆ ಮಾಡುತ್ತಾರೆ. ನಿಜಕ್ಕೂ ಅವರೊಬ್ಬ ಚಾಣಾಕ್ಷ ನಾಯಕ. ಧೋನಿ ನಾಯಕರ ನಾಯಕ. ಧೋನಿ ತಂಡದಲ್ಲಿದ್ದರೆ ಖಂಡಿತಾ ತಂಡದಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಇದೂ ಕೂಡ ತಂಡದ ಯಶಸ್ಸಿನ ಗುಟ್ಟುಗಳಲ್ಲಿ ಒಂದು ಎಂದು ರೈನಾ ಹೇಳಿದ್ದಾರೆ.
ಅಂತೆಯೇ ತಂಡದಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿದ ರೈನಾ, ನನ್ನ ಪಾಲಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಟೂರ್ನಿಯನ್ನು ನಾನು ಸಕಾರಾತ್ಮಕವಾಗಿ ನೋಡುತ್ತಿದ್ದು, ಬ್ಯಾಟಿಂದ್ ನಲ್ಲಿ ಫಾರ್ಮ್ ಕಂಡುಕೊಂಡಿರುವುದು ನನ್ನ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಕುರಿತು ಮಾತನಾಡಿದ ರೈನಾ, ಹಾರ್ದಿಕ್ ತಂಡದ ಕೀ ಪ್ಲೇಯರ್ ಆಗಬಲ್ಲರು. ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ. ಪಾಂಡ್ಯಾ ಎಸೆಯುವ 6-7 ಓವರ್ ಗಳು ಪಂದ್ಯದ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಕ್ರಮಾಂಕದಲ್ಲೂ ಆಡಬಲ್ಲ ಆಟಗಾರ. ನಿಜಕ್ಕೂ ಆತ ಉತ್ತಮ ಗೇಮ್ ಚೇಂಜರ್ ಆಗಬಲ್ಲ. ಒಂದು ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಆತ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೂ ನನಗಂತೂ ಅಚ್ಚರಿ ಇಲ್ಲ ಎಂದು ರೈನಾ ಶ್ಲಾಘಿಸಿದ್ದಾರೆ.