ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ.
ಈ ನಿಟ್ಟಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಟಿಟ್ ಮತ್ತು ನೂತನ ತಂಡದ ನಿರ್ದೇಶಕ ಮೈಕ್ ಹೇಸನ್ ಒಗ್ಗೂಡಿ ತಂಡದಲ್ಲಿ ಭರ್ಜರಿ ಸರ್ಜರಿ ಮಾಡಿದ್ದಾರೆ.ಕೋಲ್ಕತಾದಲ್ಲಿ ಡಿ. 19ರಂದು 2020ರ ಟೂರ್ನಿ ಸಲುವಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ನಿಟ್ಟಿನಲ್ಲಿ ಎಲ್ಲ 8 ಫ್ರಾಂಚೈಸಿಗಳು ಶುಕ್ರವಾರ ತಾವು ಉಳಿಸಿಕೊಂಡ ಆಟಗಾರರು ಮತ್ತು ತಂಡದಿಂದ ಕೈಬಿಟ್ಟ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲ ತಂಡಗಳು ಒಟ್ಟು 127 ಆಟಗಾರರನ್ನು ಉಳಿಸಿಕೊಂಡಿವೆ. ಇದರಲ್ಲಿ 35 ಮಂದಿ ವಿದೇಶಿ ಆಟಗಾರರು ಎಂಬುದು ವಿಶೇಷ.
ಆರ್ಸಿಬಿ ಕೂಡ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೆಲ ದೈತ್ಯ ಸ್ಟಾರ್ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಆದರೂ ಇದರಲ್ಲಿ ಕೆಲ ಆಟಗಾರರನ್ನು ಹರಾಜಿನಲ್ಲಿ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವೂ ತಂಡಕ್ಕೆ ಇದೆ. ರೈಟ್ ಟು ಮ್ಯಾಚ್ ಮೂಲಕ ಇತರ ತಂಡಗಳು ಅಂತಿಮ ಗೊಳಿಸಿದ್ದ ಡೀಲ್ ಕೂಡ ಕಸಿಯುವ ಅವಕಾಶವಿದೆ.
ನಾಯಕ ವಿರಾಟ್ ಕೊಹ್ಲಿ, ಮೊಯೀನ್ ಅಲಿ, ಯಜುವೇಂದ್ರ ಚಾಹಲ್, ಫೃಥ್ವಿ ಪಾಟೀಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪವನ್ ನೇಗಿ, ದೇವ್ ದತ್ ಪಡಿಕ್ಕಲ್, ಗುರುಕೀರಾತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ನವದೀಪ್ ಸೈನಿ, ಎಬಿ ಡಿವಿಲಿಯರ್ಸ್ ಅವರನ್ನು ಆರ್ ಸಿಬಿ ತನ್ನಲ್ಲಿಯೇ ಉಳಿಸಿಕೊಂಡಿದೆ.