ಕ್ರಿಕೆಟ್

ನನ್ನಲ್ಲೂ ಸಿಟ್ಟು , ಹತಾಶೆ, ನಿರಾಸೆ ಭಾವನೆಗಳಿವೆ, ಆದ್ರೆ ಅವೆಲ್ಲವನ್ನೂ ಉತ್ತಮವಾಗಿ ನಿರ್ವಹಿಸಬಲ್ಲೆ: ಧೋನಿ

Lingaraj Badiger

ನವದೆಹಲಿ: ಭಾರತ ತಂಡದ ‘ಕೂಲ್ ಕ್ಯಾಪ್ಟನ್’ ಎಂಬ ಖ್ಯಾತಿ ಗಳಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ‘ನನ್ನಲ್ಲೂ ಭಾವನೆಗಳಿವೆ, ನನಗೂ ಹತಾಶೆ, ನಿರಾಸೆ ಎಲ್ಲ ಆಗುತ್ತಿದ್ದವು, ಸಿಟ್ಟೂ ಬರುತ್ತಿತ್ತು. ಆದರೆ ಅವೆಲ್ಲವನ್ನೂ ಉತ್ತಮವಾಗಿ ನಿರ್ವಹಿಸುವ ಕಲೆ ನನಗೆ ಚೆನ್ನಾಗಿ ಗೊತ್ತಿತ್ತು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಜುಲೈ. 14 ರಂದು ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ಎಂ.ಎಸ್ ಧೋನಿ ಅವರು ಇದೇ ಮೊದಲ ಬಾರಿ ಜಾಹಿರಾತು ಕಾರ್ಯಕ್ರಮವೊಂದರಲ್ಲಿ ತಮ್ಮ ಮೌನ ಮುರಿದಿದ್ದಾರೆ.

ಕಾರ್ಯಕ್ರಮದಲ್ಲಿ ಹತಾಶೆ, ನಿರಾಶೆ, ಕೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ಹೌದು, ನನಗೂ ಸಿಟ್ಟು ಬರುತ್ತಿತ್ತು. ಮೈದಾನದಲ್ಲಿ ನಾವಂದುಕೊಂಡ ರೀತಿಯಲ್ಲಿ ಆಗದೇ ಹೋಗುತ್ತಿದ್ದಾಗ ಹತಾಶೆಯಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಆದರೆ, ನನ್ನ ಈ ಎಲ್ಲ ಭಾವನೆಗಳನ್ನು ಹತ್ತಿಕ್ಕಿಕೊಂಡು, ಆ ಕ್ಷಣದಲ್ಲಿ ಆಗಬೇಕಾದ ಕೆಲಸದ ಬಗ್ಗೆ ಆಲೋಚಿಸುವ ಕಲೆ ಇತರರಿಗಿಂತ ಹೆಚ್ಚಾಗಿ ನನಗೆ ಒಲಿದಿತ್ತು. ಹಾಗಾಗಿ, ಅಂಥ ಸಂದರ್ಭದಲ್ಲಿ ನಾನು ನನ್ನ ಸಹಾಯಕ್ಕೆ ಯಾರು ಬರಬಹುದು? ಯಾರನ್ನು ಬಳಸಿಕೊಂಡರೆ ಈ ವಿಕೆಟ್ ಅನ್ನು ಉರುಳಿಸಬಹುದು, ಯಾವ ಬ್ಯಾಟ್ಸ್‌‌ಮನ್ ಅನ್ನು ಮೈದಾನಕ್ಕಿಳಿಸಿದರೆ ಅನುಕೂಲವಾಗಬಹುದು ಎಂಬ ಬಗ್ಗೆ ಆಲೋಚಿಸಲು ಆರಂಭಿಸುತ್ತಿದೆ. ಇವೆಲ್ಲವೂ ಸಕಾರಾತ್ಮಕ ಚಿಂತನೆಗಳು ಆಗಿದ್ದರಿಂದ, ನಿರೀಕ್ಷಿತ ಫಲಗಳು ಸಿಗುತ್ತಿದ್ದವು ಎಂದರು. 

ಈ ಕಲೆಯನ್ನು ನಾನು ಟೀಂ ಇಂಡಿಯಾದ ನಾಯಕನಾಗಿದ್ದ ಅವಧಿಯಲ್ಲಿ ಸಮರ್ಥವಾಗಿ ಬಳಸಿಕೊಂಡೆ. ಟೆಸ್ಟ್‌ ಪಂದ್ಯಗಳಾಗಿದ್ದರೆ ಅದರಲ್ಲಿ ಎರಡು ಇನಿಂಗ್ಸ್‌‌ಗಳಿರುವುದರಿಂದ ತಂತ್ರವನ್ನು ರೂಪಿಸಲು ಸಾಕಷ್ಟು ಸಮಯ ಸಿಗುತ್ತದೆ. ಆದರೆ ಟಿ-20 ಪಂದ್ಯಗಳಲ್ಲಿ ಆ ಕ್ಷಣದಲ್ಲೇ ತಂತ್ರಗಳನ್ನು ಬದಲಿಸುತ್ತಾ ಹೋಗಬೇಕಾಗುತ್ತದೆ. ಹಾಗಾಗಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ತಂತ್ರಗಳನ್ನು ರೂಪಿಸಬೇಕಾಗುತ್ತದೆ ಎಂದು ಧೋನಿ ಸಲಹೆ ನೀಡಿದರು. 

ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಉದ್ಘಾಟನಾ ಐಸಿಸಿ ಟಿ-20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಜಯ ಸಾಧಿಸಿತ್ತು.

SCROLL FOR NEXT