ಚೆನ್ನೈ: ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರಕ್ಕಾಗಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.
ಶನಿವಾರದಿಂದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಒಂದು ವಾರದ ತರಬೇತಿಗಾಗಿ ಧೋನಿ ಹೊರತಾಗಿ ಸುರೇಶ್ ರೈನಾ, ದೀಪಕ್ ಚಹರ್, ಪಿಯೂಷ್ ಚಾವ್ಲಾ ಮತ್ತು ಕೇದರ್ ಜಾದವ್ ಚೆನ್ನೈ ಗೆ ಬಂದಿಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 13 ಅಥವಾ 14 ಮಂದಿ ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.ನಾಳೆಯಿಂದ ತರಬೇತಿ ಆರಂಭವಾಗಲಿದೆ ಎಂದು ಸಿಎಸ್ ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧೋನಿ ಮತ್ತಿತರ ಆಟಗಾರರು ಚೆನ್ನೈಗೆ ಆಗಮಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ವರ್ಷ ಜುಲೈನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಭಾರತ ನಿರ್ಗಮಿಸಿದ ಬಳಿಕ ಧೋನಿ ಯಾವುದೇ ಪಂದ್ಯ ಆಡಿಲ್ಲ, ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ನಲ್ಲಿ ಮತ್ತೆ ಕಮ್ ಬ್ಯಾಂಕ್ ಆಗಿದ್ದು, ಹೆಚ್ಚಿನ ಕುತೂಹಲ ಕೆರಳಿಸಿದೆ.
ಆಲ್ ರೌಂಡರ್ ರವೀಂದ್ರ ಜಡೇಜಾ ಹೊರತುಪಡಿಸಿದಂತೆ ಎಲ್ಲಾ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವೈಯಕ್ತಿಕ ಕಾರಣದಿಂದ ಜಡೇಜಾ ಪಾಲ್ಗೊಳ್ಳುತ್ತಿಲ್ಲ. ಯುಎಇಗೆ ತೆರಳುವ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸಿಎಸ್ ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.