ಕ್ರಿಕೆಟ್

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಯುಎಇ ಪ್ರವಾಸದಿಂದ ಹೊರಗುಳಿದ ಹರ್ಭಜನ್‌ ಸಿಂಗ್

Vishwanath S

ನವದೆಹಲಿ: ಟೀಂ ಇಂಡಿಯಾ ಅವಕಾಶ ವಂಚಿತ ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 31ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ದುಬೈಗೆ ಪ್ರಯಾಣ ಮಾಡದೇ ಇರಲು ನಿರ್ಧರಿಸಿದ್ದಾರೆ.

ತಮ್ಮ ತಾಯಿಯ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಆಗಸ್ಟ್‌ 21ರಂದು ಐಪಿಎಲ್‌ 2020 ಟೂರ್ನಿ ಸಲುವಾಗಿ ದುಬೈಗೆ ಪ್ರಯಾಣ ಬೆಳಸದೇ ಇರಲು ಭಜ್ಜಿ ನಿರ್ಧರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಟರ್ಬನೇಟರ್‌ ಖ್ಯಾತಿಯ ಅನುಭವಿ ಆಫ್‌ ಸ್ಪಿನ್ನರ್‌, ಈಗಾಗಲೇ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡ ಆಯೋಜಿಸಿದ್ದ 5 ದಿನಗಳ ಕಂಡೀಷನಿಂಗ್‌ ಶಿಬಿರದಿಂದಲೂ ಹೊರಗುಳಿದಿದ್ದರು. ಇನ್ನು ತಮ್ಮ ಅಲಭ್ಯತೆ ಕುರಿತಾಗಿ ಈಗಾಗಗಲೇ ಫ್ರಾಂಚೈಸಿ ಮಾಲೀಕರಿಗೆ ವಿಚಾರ ಮುಟ್ಟಿಸಿರುವ ಹರ್ಭಜನ್‌ ಎರಡು ವಾರ ತಡವಾಗಿ ತಂಡ ಸೇರಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2018ರ ಐಪಿಎಲ್‌ ಸಲುವಾಗಿ ನಡೆದ ಆಟಗಾರರ ಹರಾಜಿನಲ್ಲಿ ಸೂಪರ್‌ ಕಿಂಗ್ಸ್‌ ತಂಡ ಬರೋಬ್ಬರಿ 2 ಕೋಟಿ ರೂ. ನೀಡಿ ಹರ್ಭಜನ್‌ ಸಿಂಗ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 2018ರಲ್ಲಿ ಸಿಎಸ್‌ಕೆ ಪ್ರಶಸ್ತಿ ಗೆಲ್ಲುವಲ್ಲಿ ಮತ್ತು 2019ರ ಆವೃತ್ತಿಯಲ್ಲಿ ರನ್ನರ್ಸ್‌ಅಪ್‌ ಸ್ಥಾನ ಪಡೆಯುವಲ್ಲಿ ಭಜ್ಜಿ ಮಹತ್ವದ ಪಾತ್ರ ವಹಿಸಿದ್ದರು. ಅದರಲ್ಲೂ ಕಳೆದ ವರ್ಷ ಆಡಿದ 11 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದರು.

ಐಪಿಎಲ್‌ನಲ್ಲಿ 160 ಪಂದ್ಯಗಳನ್ನು ಆಡಿರುವ 39 ವರ್ಷದ ಅನುಭವಿ ಆಫ್‌ ಸ್ಪಿನ್ನರ್‌ 26.44ರ ಸರಾಸರಿಯಲ್ಲಿ ಒಟ್ಟು 150 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಇನಿಂಗ್ಸ್‌ ಒಂದರಲ್ಲಿ 18ಕ್ಕೆ 5 ವಿಕೆಟ್‌ ಉರುಳಿಸಿರುವುದು ಅವರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ. ಆಗಾಗ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡಿರುವ ಭಜ್ಜಿ 829 ರನ್‌ಗಳನ್ನೂ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ.

SCROLL FOR NEXT