ಕ್ರಿಕೆಟ್

ನಿಮ್ಮ ಒಂದು ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ: ಐಪಿಎಲ್ ಆರಂಭಕ್ಕೂ ಮೊದಲೇ ಆರ್‌ಸಿಬಿ ಆಟಗಾರರನ್ನು ಎಚ್ಚರಿಸಿದ ಕೊಹ್ಲಿ

Vishwanath S

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ತಂಡ ಸಂಪೂರ್ಣ 21 ಆಟಗಾರರನ್ನು ಒಳಗೊಂಡ ಆನ್ ಲೈನ್ ಮೀಟಿಂಗ್ ನಡೆಸಿದ್ದು, ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಖಡಕ್ ಎಚ್ಚರಿಕೆ ಒಂದನ್ನು ರವಾನಿಸಿದ್ದಾರೆ.

ಕೊರೊನಾ ವೈರಸ್ ಕಾರಣ ಐಪಿಎಲ್ 2020 ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಆಯೋಜಿಸಲಾಗುತ್ತಿದೆ. ಬಯೋ ಸೆಕ್ಯೂರ್ ವಾತಾವರಣ ಹೊಂದಿರುವ ದುಬೈ, ಶಾರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳನ್ನು ಅತ್ಯಂತ ಸುರಕ್ಷಿತವಾಗಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. 

ಆದರೆ, ಯಾವುದೇ ಒಬ್ಬ ಆಟಗಾರ ಕೂಡ ಈ ಬಯೋ ಸೆಕ್ಯೂರ್ ನಿಯಮದ ಉಲ್ಲಂಘನೆ ಮಾಡಿದರೆ ಅದರಿಂದ ಎಲ್ಲರೂ ತೊಂದರೆಗೆ ಒಳಗಾಗಬೇಕಾಗುತ್ತದೆ. ಇಡೀ ತಂಡದ ಮೇಲೆ ಇದರ ದುಷ್ಪರಿಣಾಮ ಬೀಳುತ್ತದೆ. ಹೀಗಾಗಿ ಇದಕ್ಕೆ ಕಿಂಚಿತ್ತೂ ಅವಕಾಶ ಮಾಡಿಕೊಡಬಾರದು ಎಂದು ಸಭೆಯಲ್ಲಿ ಆರ್ ಸಿಬಿ ಕಪ್ತಾನ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಎಲ್ಲಾ ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ನಮಗೆ ಸೂಚಿಸಲಾಗುವ ಎಲ್ಲಾ ನಿಯಮಗಳನ್ನು ಪಾಲಿಸೋಣ. ಬಯೋ ಬಬಲ್ ವಾತಾವರಣವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ಪ್ರತಿಯೊಬ್ಬ ಆಟಗಾರ ಮತ್ತು ಸಿಬ್ಬಂದಿ ಸಹಕರಿಸಬೇಕು. ಯವುದೇ ಕಾರಣಕ್ಕೂ ನಿಯಮ ಉಲ್ಲಂಘನೆಯಾಗಬಾರದು ಎಂದು ಕೊಹ್ಲಿ ಹೇಳಿದ್ದಾರೆ. 

ಏಕೆಂದರೆ ಒಂದೇ ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಲ್ಲದು. ಹೀಗಾಗಿ ನನ್ನ ತಂಡದ ಯಾವೊಬ್ಬ ಆಟಗಾರನಿಂದಲೂ ಈ ರೀತಿಯ ತಪ್ಪು ಆಗಬಾರದು ಎಂದು ಆರ್ ಸಿಬಿ ತಂಡದ ನಿದೇಶಕ ಮೈಕ್ ಹೇಸನ್ ಹೇಳಿದ್ದು, ನಿಯಮದ ಉಲ್ಲಂಘನೆಯಾದರೆ ಕಟ್ಟು ನಿಟ್ಟಿನ ಶಿಸ್ತು ಕ್ರಮ ಎದುರಿಸುವಂತಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಭೆಯಲ್ಲಿ ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಕೂಡ ಉಪಸ್ಥಿತರಿದ್ದರು. 

ನಿಯಮದ ಉಲ್ಲಂಘನೆಯಾದರೆ ಅದನ್ನು ಬಹಳ ಕಠಿಣವಾಗಿ ಪರಿಗಣಿಸಲಾಗುವುದು. ಆಕಸ್ಮಿಕವಾಗಿ ಗೊತ್ತಿಲ್ಲದೆ ನಿಯಮದ ಉಲ್ಲಂಘನೆಯಾದರೆ ಆ ಆಟಗಾರ 7 ದಿನಗಳ ಕಾಲ ಪ್ರತ್ಯೇಕವಾಗಿ ಉಳಿಯುವಂತಾಗುತ್ತದೆ. ನಂತರ ಕೊರೊನಾ ವೈರಸ್ ಟೆಸ್ಟ್ ಗೆ ಒಳಪಟ್ಟು ನೆಗೆಟೀವ್ ಫಲಿತಾಂಶ ಬಂದರಷ್ಟೇ ತಂಡವನ್ನು ಮರಳಿ ಸೇರಿಕೊಳ್ಳಬಹುದು ಎಂದು ಹೇಸನ್ ವಿವರಿಸಿದ್ದಾರೆ.

ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಯೋ ಸೆಕ್ಯೂರ್ ವಾತಾವರಣ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇದಕ್ಕಾಗಿ ತಂಡದಲ್ಲಿ ಒಂದೊಳ್ಳೆ ಸಂಸ್ಕೃತಿ ಪಾಲಿಸೋಣ. ಅಭ್ಯಾಸಕ್ಕೆ ಇಳಿದ ಮೊದಲ ದಿನದಿಂದಲೇ ಈ ಸಂಸ್ಕೃತಿಯನ್ನು ಎಲ್ಲರೂ ರೂಢಿಸಿಕೊಳ್ಳೋಣ ಎಂದು ಕೊಹ್ಲಿ ಸಹ ಆಟಗಾರರಲ್ಲಿ ಮನವಿ ಮಾಡಿದ್ದಾರೆ.

SCROLL FOR NEXT