ಕ್ರಿಕೆಟ್

ಐಪಿಎಲ್ 2020: ಸುರೇಶ್ ರೈನಾ ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಲು ಅಸಲಿ ಕಾರಣವೇನು ಗೊತ್ತಾ?

Nagaraja AB

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಆಟಗಾರ ಸುರೇಶ್ ರೈನಾ ಆಗಸ್ಟ್ 29 ರಂದು ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಿದ್ದಾರೆ.  ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಅವರು ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಫ್ರಾಂಚೈಸಿ ಸಿಇಒ ಕೆ. ಎಸ್. ವಿಶ್ವನಾಥನ್ ಹೇಳಿಕೆ ನೀಡಿದ್ದರು. ಆದರೆ, ಅಸಲಿ ಕಾರಣ ಬೇರೆಯೇ ಇದೆ.  

ಸುರೇಶ್ ರೈನಾ ಅವರಿಗೆ ಒದಗಿಸಲಾದ ಹೋಟೆಲ್ ಕೊಠಡಿ ಬಗ್ಗೆ ಅಸಮಾಧಾನದಿಂದ ಅವರು ವಾಪಸ್ಸಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿರುವ ಕೊಠಡಿಯನ್ನು ಹೊಂದಲು ಸುರೇಶ್ ರೈನಾ ಬಯಸಿದ್ದರು ಎಂಬುದು ತಿಳಿದುಬಂದಿದೆ.

ಚೆನ್ನೈ ಸೂಪರ್ ಕಿಂಗ್ಸ್  ತಂಡ ಯಾವಾಗಲೂ ಕುಟುಂಬವಿದ್ದಂತೆ, ಎಲ್ಲಾ ಆಟಗಾರರು ಸಹಭಾಳ್ವೆಯನ್ನು ಕಲಿಯಬೇಕು, ಅಸಮಾಧಾನ ಅಥವಾ ಅಸಂತೋಷವಿದ್ದರೆ ಭಾರತಕ್ಕೆ ವಾಪಸ್ಸಾಗಬಹುದು, ಬಲವಂತದ ಪ್ರಶ್ನೆಯೇ ಇಲ್ಲ, ಕೆಲವು ಸಲ ಯಶಸ್ಸು ನೆತ್ತಿಗೇರಲಿದೆ ಎಂದು ಸಿಎಸ್ ಕೆ ಮಾಲೀಕ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್  ಹೇಳಿದ್ದಾರೆ.

ಧೋನಿಯೊಂದಿಗೆ ಮಾತನಾಡಿದ್ದು, ಆಟಗಾರರ ಸಂಖ್ಯೆ ಕಡಿಮೆಯಾದರೂ ಭಯಪಡಬೇಕಾಗಿಲ್ಲ ಎಂಬ ಭರವಸೆ ನೀಡಿದ್ದಾರೆ. ಜೂಮ್ ಕಾಲ್ ಮೂಲಕ ಎಲ್ಲಾ ಆಟಗಾರರೊಂದಿಗೆ ಮಾತನಾಡಿದ್ದೇನೆ. ಇನ್ನೂ ಲೀಗ್ ಆರಂಭವಾಗಿಯೇ ಇಲ್ಲ, ಸುರೇಶ್ ರೈನಾ ಭಾರತಕ್ಕೆ ವಾಪಸ್ಸಾಗಿದ್ದಾರೆ. ಪ್ರಸ್ತುತ ಆವೃತ್ತಿಗೆ ನೀಡಲಾಗುತ್ತಿದ್ದ 11 ಕೋಟಿ ಸಂಬಳವನ್ನು ಕೂಡಾ ಕಳೆದುಕೊಂಡಿದ್ದಾರೆ ಎಂದು ಸಿಎಸ್ ಕೆ ಮಾಲೀಕರು ತಿಳಿಸಿದ್ದಾರೆ.

ಕೆಲ ಆಟಗಾರರು ಕೋವಿಡ್-19 ಪಾಸಿಟಿವ್ ಹೊಂದಿದ್ದರೂ ಕೂಡಾ ಸಿಎಸ್ ಕೆ ತಂಡ ಐಪಿಎಲ್ 2020ಗಾಗಿ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ.

SCROLL FOR NEXT