ಕ್ರಿಕೆಟ್

ಮೂರನೇ ಪಂದ್ಯ ನಾಳೆ: ವರ್ಷದ ಮೊದಲ ಟಿ20 ಸರಣಿ ಗೆಲ್ಲುವತ್ತ ಟೀಂ ಇಂಡಿಯಾ ಚಿತ್ತ

Raghavendra Adiga

ಪುಣೆ: ಎರಡನೇ ಪಂದ್ಯದ ಗೆಲುವಿನ ಹಮ್ಮಸ್ಸಿನಲ್ಲಿರುವ ಭಾರತ ತಂಡ ನಾಳೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿ ವರ್ಷದ ಮೊದಲ ಟಿ20 ಸರಣಿ ವಶಪಡಿಸಿಕೊಳ್ಳವ ತುಡಿತದಲ್ಲಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲನೇ ಪಂದ್ಯ ಗುವಾಹಟಿಯಲ್ಲಿ ಮಳೆಗೆ ಬಲಿಯಾಗಿತ್ತು, ನಂತರ, ಇಂದೋರ್ ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಗಳಿಂದ ಜಯ ಸಾಧಿಸಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ 1-0 ಮುನ್ನಡೆ ಸಾಧಿಸಿದೆ.

ಎರಡನೇ ಪಂದ್ಯದಲ್ಲಿ ಭಾರತ ತಂಡ ಮೂರೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡ ಪುಟಿದೇಳಲು ಸಾಧ್ಯವಾಗಿರಲಿಲ್ಲ. ಗಾಯದಿಂದ ಚೇತರಿಸಿಕೊಂಡು ಮೊದಲ ಪಂದ್ಯವಾಡಿದ್ದ  ಜಸ್ಪ್ರಿತ್ ಬುಮ್ರಾ ಅವರು ಉತ್ತಮ ಬೌಲಿಂಗ್ ಮಾಡಿದ್ದರು. 

ಲಂಕಾ ವಿರುದ್ಧ ಮೂರನೇ ಪಂದ್ಯದ ಬಳಿಕ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಚಿತ್ತ ಹರಿಸಲಿದೆ.

ಮತ್ತೊಂದೆಡೆ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿರುವ ಶ್ರೀಲಂಕಾ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಯೋಜನೆಯೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ.

ನಾಯಕ ಲಸಿತ್ ಮಲಿಂಗಾ ಅವರು  ಗಾಯಾಳು ಇಸುರು ಉದನ ಅವರ ಸ್ಥಾನಕ್ಕೆ ಏಂಜೆಲೊ ಮ್ಯಾಥ್ಯೂಸ್ ಗೆ ಸ್ಥಾನ ಕಲ್ಪಿಸಿದ್ದಾರೆ. ಇಸುರು ಉದನ ಅವರು ಬೆನ್ನು ನೋವಿಗೆ ಒಳಗಾಗಿದ್ದಾರೆ. 2018ರಲ್ಲಿ ಕೊನೆಯ ಟಿ-20 ಪಂದ್ಯವಾಡಿದ್ದ ಮ್ಯಾಥ್ಯೂಸ್ ಅವರು ಇದೀಗ ನಾಳೆ ತಂಡಕ್ಕೆ ಮರಳುತ್ತಿದ್ದಾರೆ. ಬ್ಯಾಟಿಂಗ್ ಜತೆಗೆ, ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಲಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಶಿವಮ್ ದುಬೆ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್.

ಶ್ರೀಲಂಕಾ: ಲಸಿತ್ ಮಲಿಂಗಾ(ನಾಯಕ), ಧನುಷ್ಕ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸೂನ್ ಶನಕ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್, ಧನಂಜಯ್ ಡಿ ಸಿಲ್ವಾ, ಇಸುರು ಉದನ, ಭನುಕ ರಾಜಪಕ್ಸ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂಡಕನ್, ಕಸೂನ್ ರಜಿತಾ

ಪಂದ್ಯದ ದಿನಾಂಕ: ಜನವರಿ 10
ಪಂದ್ಯದ ಪ್ರಾರಂಭ ಸಮಯ: ಸಂಜೆ 7 ಗಂಟೆ
ಕ್ರೀಡಾಂಗಣ: ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ, ಪುಣೆ

SCROLL FOR NEXT