ಕ್ರಿಕೆಟ್

3ನೇ ಟಿ20 ಪಂದ್ಯ: ಭಾರತ-ಶ್ರೀಲಂಕಾಕ್ಕಿಂದು ನಿರ್ಣಾಯಕ ಕದನ

Manjula VN

ಪುಣೆ: ಐಸಿಸಿ ಟಿ20 ವಿಶ್ವಕಪ್'ಗೆ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಶುಕ್ರವಾರ ಪುಣೆ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿದ್ದು, ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲ್ಲುವುದರ ಜೊತೆಗೆ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. 

ಮನೀಸ್ ಪಾಂಡೆ ಹಾಗೂ ಸಂಜು ಸ್ಯಾಮ್ಸನ್ ರನ್ನು ಆಯ್ಕೆಗಾರರು ಪ್ರತಿ ಸರಣಿಗೂ ಆಯ್ಕೆ ಮಾಡುತ್ತಿದ್ದಾರೆಯಾದರೂ, ಇಬ್ಬರಿಗೂ ಆಡುವ ಹನ್ನೊಂದರಲ್ಲಿ ಮಾತ್ರ ಸ್ಥಾನ ಸಿಗುತ್ತಿಲ್ಲ. ಈ ಸರಣಿಯೂ ಸೇರಿದಂತೆ ಕಳೆದ 3 ಸರಣಿಗಳಲ್ಲಿ ಪಾಂಡೆ ಕೇವಲ ಒಂದು ಪಂದ್ಯದಲ್ಲಷ್ಟೇ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ನವೆಂಬರ್ ತಿನಂಗಳಿನಲ್ಲಿ ನಡೆದ ಸರಣಿ ವೇಳೆಗೆ ತಂಡಕ್ಕೆ ವಾಪಾಸ್ಸಾದ ಸ್ಯಾಮ್ಸನ್'ಗೆ ಇದೂವರೆಗೂ ಒಂದೂ ಅವಕಾಶ ನೀಡಿಲ್ಲ. 

ಅಕ್ಟೋಬರ್-ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಸಿದ್ಧತೆ ನಡೆಸುತ್ತಿರುವ ಭಾರತ, ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಆದರೆ, ಸ್ಯಾಮ್ಸನ್ ಹಾಗೂ ಪಾಂಡೆಯನ್ನು ಮಾತ್ರ ಆಯ್ಕೆಗೆ ಪರಿಗಣಿಸುತ್ತಿಲ್ಲ ಏಕೆ ಎನ್ನುವ ಕುತೂಹಲ ಮೂಡಿದೆ. 

ಇಂದೋರ್ ಪಂದ್ಯದಲ್ಲಿ ಭಾರತದ ಮುಂದೆ ಅನುಭವಿ ಶ್ರೀಲಂಕಾ ಯಾವುದೇ ಹೋರಾಟ ನೀಡಲಿಲ್ಲ. ಅದನ್ನು ಪರಿಗಣಿಸಿ ಈ ಪಂದ್ಯದಲ್ಲಿ ಸ್ಯಾಮ್ಸನ್ ಹಾಗೂ ಮನೀಶ್'ಗೆ ಅವಕಾಶ ನೀಡಬಹುದು ಎನ್ನುವ ಲೆಕ್ಕಾಚಾರವಿದೆ. ಆದರೆ, ಸರಣಿ ಗೆಲ್ಲಬೇಕು ಎನ್ನುವ ಗುರಿ ಹೊಂದಿರುವ ಭಾರತ, ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದರೆ ಅಚ್ಚರಿ ಪಡಬೇಕಿಲ್ಲ. 

ಮತ್ತೊಂದೆಡೆ ಹಿರಿಯ ವೇಗಿಗಳ ಅನುಪಸ್ಥಿತಿಯಲ್ಲಿ ನವ್ ದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್'ಗೆ ತಂಡದ ಬಾಗಿಲು ತೆಗೆದಿದ್ದು, ಇಬ್ಬರು ಆಕರ್ಷಕ ಪ್ರದರ್ಶನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆಗೂ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. 

ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣಿದೆ. ಕಳೆದ ಪಂದ್ಯದಲ್ಲಿ ಧವನ್ ರನ್ ಗಳಿಸಲು ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದಾರೆ ಎನಿಸಿತು. ಅವರ ಇನ್ನಿಂಗ್ಸ್ ಸಮಾಧಾನಕರವಾಗಿರಲಿಲ್ಲ. ವಿಶ್ವಕಪ್ ತಂಡದಲ್ಲಿ ಆರಂಬಿಕ ಸ್ಥಾನಕ್ಕೆ ಪೈಪೋಟಿ ಇದ್ದು, ಧವನ್ ಗಿಂತ ಕೆ.ಎಲ್. ರಾಹುಲ್ ಬಹಳ ಮುಂದಿದ್ದಾರೆ. 

ಕಳೆದ ಪಂದ್ಯದಲ್ಲಿ ಜಸ್ ಪ್ರೀತ್ ಬೂಮ್ರಾ ತಮ್ಮ ಎಂದಿನ ಲಯದಲ್ಲಿ ಬೌಲ್ ಮಾಡಲಿಲ್ಲ. ಆಸ್ಟ್ರೇಲಿಯಾ ಸರಣಿಗೂ ಮುನ್ನ ಲಯಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಆಯ್ಯರ್ ರ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೋಡಲು ಪುಣೆ ಅಭಿಮಾನಿಗಳು ಕಾಯುತ್ತಿದ್ದಾರೆ. 

SCROLL FOR NEXT