ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಆಯ್ಕೆಯಾದುದರ ಹಿಂದೆ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪಾತ್ರ ಬಹುದೊಡ್ಡದು.
ಆಯ್ಕೆ ಸಮಿತಿ ತಂಡಕ್ಕೆ ಯಾವ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಯ್ಕೆ ಮಾಡಬೇಕು ಎಂದು ಗೊಂದಲದಲ್ಲಿ ಇದ್ದಂತಹ ಸಂದರ್ಭದಲ್ಲಿ ಧೋನಿಯನ್ನು ಪ್ರಯೋಗ ಮಾಡುವ ಸಲಹೆ ನೀಡಿದ್ದೇ ಸೌರವ್ ಗಂಗೂಲಿ.
ಬಳಿಕ, 2004ರ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಧೋನಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ಆದರೆ, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಧೋನಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಹೇಳಿಕೊಳ್ಳುವ ಪ್ರದರ್ಶನವೇನೂ ನೀಡಿರಲಿಲ್ಲ.
ಆದರೆ, ಧೋನಿಯನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿಸುವ ಪ್ರಯೋಗ ಮಾಡಿದ್ದು ಕೂಡ ಕ್ಯಾಪ್ಟನ್ ಸೌರವ್ ಗಂಗೂಲಿ. ಅಂದು ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಗಿಟ್ಟಿಸಿದ್ದ ಧೋನಿ ಹಿಂದಿರುಗಿ ನೋಡಿದ್ದೇ ಇಲ್ಲ. ಈ ಹಿಂದಿನ ನಾಲ್ಕೂ ಇನಿಂಗ್ಸ್ಗಳ ವೈಫಲ್ಯವನ್ನು ಮರೆತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 148 ರನ್ಗಳನ್ನು ಚಚ್ಚಿದ್ದರು.
ನಂತರ ಎಲ್ಲವೂ ಇತಿಹಾಸ. ಧೋನಿ, ಐಸಿಸಿ ಆಯೋಜಿಸುವ ಟಿ20 ಮತ್ತು ಒಡಿಐ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಎಲ್ಲವನ್ನೂ ಗೆದ್ದುಕೊಟ್ಟ ವಿಶ್ವದ ಏಕಮಾತ್ರ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು. ಇದೀಗ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕನ ಬಗ್ಗೆ ಅವರ 39ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತಿಗಿಳಿದಿರುವ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ, ಅಂದು ಧೋನಿಯನ್ನು 3ನೇ ಕ್ರಮಾಂಕದಲ್ಲಿ ಆಡಿಸಿದ್ದೇಕೆ ಎಂದು ವಿವರಿಸಿದ್ದಾರೆ.