ಕ್ರಿಕೆಟ್

ಕಾಫಿ ವಿತ್ ಕರಣ್: ನಿಷೇಧದ ನಂತರ ಸ್ವಾರ್ಥದ‌ ಆಟಕ್ಕೆ ವಿದಾಯ ಹೇಳಿದ ಕೆಎಲ್ ರಾಹುಲ್‌

Vishwanath S

ನವದೆಹಲಿ: ಮಹೇಂದ್ರ ಸಿಂಗ್  ಧೋನಿ ಅಲಭ್ಯತೆ ವೇಳೆ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೊಂದಲಕ್ಕೆ  ಪರಿಹಾರವಾಗಿ ಹೊರಹೊಮ್ಮಿರುವ ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯಕ್ಕೆ ಮರಳುತ್ತಿದ್ದಾರೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ತಾವು ಹೆಚ್ಚಿನ ಸ್ಥಿರತೆ ಕಂಡುಕೊಳ್ಳಲು ತಮ್ಮೊಳಗಿನ ಸೆಲ್ಫಿಶ್ ಆಟವನ್ನು ಬದಿಗೊತ್ತಿ ತಂಡದ ಅಗತ್ಯತೆಗೆ ತಕ್ಕಂತೆ ಆಡಲು ಮುಂದಾಗಿರುವುದು ಪ್ರಮುಖ ಕಾರಣ ಎಂಬ ಅಚ್ಚರಿಯ ಸಂಗತಿಯೊಂದನ್ನು ರಾಹುಲ್ ಇದೀಗ ಬಹಿರಂಗಪಡಿಸಿದ್ದಾರೆ. 

ಕಳೆದ ವರ್ಷ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಟ್ಟಿಗೆ ಕಾಫಿ ವಿತ್ ಕರಣ್ ಚಾಟ್ ಶೋ ಒಂದರಲ್ಲಿ ಪಾಲ್ಗೊಂಡು ಮಹಿಳೆಯರ ವಿಚಾರವಾಗಿ ಅಸಭ್ಯವಾಗಿ ಮಾತನಾಡಿದ್ದ ರಾಹುಲ್ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಈ ಇಬ್ಬರೂ ಆಟಗಾರರ ವಿರುದ್ಧ ನಿಷೇಧ ಶಿಕ್ಷೆಯನ್ನೂ ಹೇರಿತ್ತು. 

ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದ ಈ ಇಬ್ಬರೂ ಆಟಗಾರರನ್ನು ಅರ್ಧಕ್ಕೆ ತಾಯ್ನಾಡಿಗೆ ಹಿಂದಿರುಗುವಂತೆ ಬಿಸಿಸಿಐ ಆದೇಶಿಸಿತ್ತು. ಈ ನಿಷೇಧದ ಅವಧಿ ತಮ್ಮೊಳಗೆ ಇನ್ನಿಲ್ಲದ ಬದಲಾವಣೆ ತಂದಿದೆ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಹುಲ್ ಹೇಳಿಕೊಂಡಿದ್ದಾರೆ.

2019ರ ಬಳಿಕ ನನ್ನ ಆಲೋಚನೆಗಳಲ್ಲಿ ಆದ ಬದಲಾವಣೆಗಳಿಂದಲೇ ನಾನು ಇಷ್ಟು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿದೆ. ನಿಷೇಧ ಸೇರಿದಂತೆ ಹಲವು ಸಂಗತಿಗಳು ನಡೆದ ಬಳಿಕ ಸೆಲ್ಫಿಶ್ ಆಗಿದ್ದೆ, ಕೇವಲ ನನಗಾಗಿ ಆಡುವ ಮನಸ್ಸು ಮಾಡಿ ವೈಫಲ್ಯ ಕಂಡಿದ್ದೆ. ಬಳಿಕ ನನಗೆ ನಾನೇ ಹೇಳಿಕೊಂಡೆ, ತಂಡದ ಅಗತ್ಯತೆಗೆ ತಕ್ಕಂತೆ ಆಡಿ, ತಂಡ ನನ್ನಿಂದ ನಿರೀಕ್ಷಿಸುತ್ತಿರುವುದನ್ನು ಪೂರೈಸುವಂತೆ ಹೇಳಿಕೊಂಡೆ ಎಂದು ರಾಹುಲ್ ಹೇಳಿದ್ದಾರೆ.

SCROLL FOR NEXT