ಕ್ರಿಕೆಟ್

ಧೋನಿ ಸಿಎಸ್ ಕೆ ನಾಯಕತ್ವ ತ್ಯಜಿಸುವ ಸಾಧ್ಯತೆ ಇದೆ: ಸಂಜಯ್ ಬಂಗಾರ್

Lingaraj Badiger

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಆರಂಭವಾದಾಗಿನಿಂದಲೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಅವರು 2021ರ ಆವೃತ್ತಿಯಲ್ಲಿ ತಮ್ಮ ನಾಯಕತ್ವವನ್ನು ಬೇರೆ ಆಟಗಾರನಿಗೆ ನೀಡಲಿದ್ದಾರೆಂದು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್‌ ಬಾಂಗರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧೋನಿ ಅವರು ಐಪಿಎಲ್ ವೇಳೆ ಫಾರ್ಮ್‌ನಲ್ಲೂ ಇರಲಿಲ್ಲ. ಹೀಗಾಗಿ ಮುಂದಿನ ಐಪಿಎಲ್‌ ವೇಳೆ ಧೋನಿ ಅವರು ತಾವಾಗಿಯೇ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್‌ಗೆ ಬಿಟ್ಟುಕೊಡಬಹುದು ಎಂದು ಬಂಗಾರ್ ಹೇಳಿದ್ದಾರೆ.

'ಟೀಂ ಇಂಡಿಯಾ ನಾಯಕತ್ವದ ವಿಚಾರದಲ್ಲೂ ಕಷ್ಟ ಅನ್ನಿಸಿದಾಗ ಎಂಎಸ್ ಧೋನಿ, ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ್ದರು. ಹೀಗಾಗಿ ಮುಂದಿನ ವರ್ಷ ಧೋನಿ ನಾಯಕರಾಗಿ ಆಡದೆ ಸಾಮಾನ್ಯ ಆಟಗಾರನಾಗಿ ಆಡಲಿದ್ದಾರೆ. ನಾಯಕತ್ವವನ್ನು ಡು ಪ್ಲೆಸಿಸ್‌ಗೆ ಬಿಡುಕೊಡಲಿದ್ದಾರೆ ಅನ್ನಿಸುತ್ತದೆ,' ಎಂದು ಬಂಗಾರ್ ಸ್ಟಾರ್‌ಸ್ಪೋರ್ಟ್ಸ್‌ ಗೆ ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯವಾಗಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತ್ತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಪ್ಲೇಆಫ್ಸ್‌ನಿಂದ ಹೊರ ನಡೆಯಿತು. ಕಳೆದ ಆಗಸ್ಟ್‌ 15 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಎಂಎಸ್‌ ಧೋನಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

SCROLL FOR NEXT