ಕ್ರಿಕೆಟ್

ಭಾರತ ವಿರುದ್ಧದ 2ನೇ ಟಿ-20: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ

Nagaraja AB

ಕೊಲಂಬೊ: ಇಲ್ಲಿನ ಪ್ರೇಮ್ ದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಮೊದಲ ಪಂದ್ಯ ಗೆದ್ದು ಉತ್ಸಾಹದಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಜ್ಜುಗೊಂಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ತಿರುಗೇಟು ನೀಡಲು ಲಂಕಾ ಪಡೆ ಕಸರತ್ತು ನಡೆಸಿದೆ.

ಕೃಣಾಲ್ ಪಾಂಡೆಗೆ ಕೋವಿಡ್-19 ಸೋಂಕು ದೃಢಪಟ್ಟ ನಂತರ ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಸಾನ್, ಸೂರ್ಯಕುಮಾರ್ ಯಾದವ್, ಯಜುರ್ವೇದ ಚಹಲ್ ಮತ್ತು ದೀಪಕ್ ಚಾಹರ್ ಐಸೋಲೇಷನ್ ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಏಳು ಜನ ಹೊಸ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ.

ರುತುರಾಜ್ ಗಾಯಕ್ ವಾಡ್, ದೇವದತ್ ಪಡಿಕ್ಕಲ್, ನಿತೀಶ್ ರಾಣಾ, ಕುಲದೀಪ್ ಯಾದವ್, ರಾಹುಲ್ ಚಾಹಲ್ , ನವದೀಪ್ ಸೈನಿ, ಮತ್ತು ಚೇತನ್ ಸಕಾರಿಯಾ ತಂಡ ಸೇರ್ಪಡೆಯಾದ ಆಟಗಾರರು. ಗಾಯಕ್ ವಾಡ್, ಪಡಿಕ್ಕಲ್ , ರಾಣಾ ಮತ್ತು ಸಕಾರಿಯಾ ಅವರಿಗೆ ಇದು ಚೊಚ್ಚಲ ಪಂದ್ಯವಾಗಿದೆ.

ಟೀಂ ಇಂಡಿಯಾ ಇಂತಿದೆ: ಶಿಖರ್ ಧವನ್ ( ಕ್ಯಾಪ್ಟನ್ ) ರುತುರಾಜ್ ಗಾಯಕ್ ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಾಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ

ಶ್ರೀಲಂಕಾ ತಂಡ ಇಂತಿದೆ: ಅವಿಷ್ಕಾ ಫರ್ನಾಂಡೊ, ಮಿನೊದ್ ಬಾನುಕಾ, ಸದೀರಾ ಸಮರ ವಿಕ್ರಮ, ಧನಂಜಯ ಡಿ ಸಿಲ್ವಾ, ರಮೇಶ್ ಮೆಂಡಿಸ್, ದಾಸುನ್ ಶಾನಕ, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದಾನ, ದುಷ್ಮುಂಥ ಚಾಮೀರಾ, ಅಕಿಲಾ ಧನಂಜಯ.

SCROLL FOR NEXT