ಕ್ರಿಕೆಟ್

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಭಾರತಕ್ಕೆ ಅಭ್ಯಾಸದ ಕೊರತೆ ಕಾಡಲಿದೆ- ಯುವರಾಜ್ ಸಿಂಗ್

Nagaraja AB

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಪ್ರಸ್ತುತ ವೇಳಾಪಟ್ಟಿ ಟೀಂ ಇಂಡಿಯಾಕ್ಕೆ ಸ್ವಲ್ಪ ಅನಾನೂಕೂಲವಾಗುವಂತಿದ್ದು, ಇದು ಮೂರು ಪಂದ್ಯಗಳ ಮುಖಾಮುಖಿಯಾಗಿರಬೇಕು ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಇಂಗ್ಲೆಂಡ್‌ಗೆ ಬಂದಿಳಿದಿರುವ ಟೀಂ ಇಂಡಿಯಾ, ಸೀಮಿತ ತಯಾರಿ ಸಮಯದೊಂದಿಗೆ ಜೂನ್ 18 ರಿಂದ ಸೌತಾಂಪ್ಟನ್‌ನಲ್ಲಿ ಪಂದ್ಯ ಆಡಲಿದೆ. ನ್ಯೂಜಿಲೆಂಡ್ ಈಗಾಗಲೇ ಆತಿಥೇಯ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಸರಣಿಯನ್ನು ಆಡುತ್ತಿದೆ.

ಈ ರೀತಿಯ ಪರಿಸ್ಥಿತಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ಇರಬೇಕು ಅನಿಸುತ್ತಿದೆ. ಏಕೆಂದರೆ, ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಮತ್ತೇರಡು ಪಂದ್ಯಗಳಲ್ಲಿ ಮತ್ತೆ ಸೋಲಿನಿಂದ ಹೊರಬರಬಹುದಾಗಿದೆ. ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ಭಾರತಕ್ಕೆ ಸ್ವಲ್ಪ ಅನಾನುಕೂಲವಾಗಲಿದೆ ಎಂದು ಯುವರಾಜ್ ಸಿಂಗ್ ಸ್ಪೋರ್ಟ್ಸ್ ಟಾಕ್ ಗೆ ಹೇಳಿದ್ದಾರೆ.

8-10 ಅಭ್ಯಾಸ ಅವಧಿಗಳಿವೆ ಆದರೆ ಪಂದ್ಯ-ಅಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಇದು ಒಂದು ಸ್ಪರ್ಧೆಯಾಗಲಿದೆ ಆದರೆ, ನ್ಯೂಜಿಲೆಂಡ್ ಅಂಚಿಗೆ ಹೋಗಲಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿದರೆ ಭಾರತದ ಬ್ಯಾಟಿಂಗ್ ಕ್ರಮಾಂಕ ಬಲವಾಗಿದೆ. ಇತ್ತೀಚಿಗೆ ವಿದೇಶದಲ್ಲಿಯೂ ಗೆದಿದ್ದು, ಟೀಂ ಇಂಡಿಯಾ ಬಲವಾಗಿರುವ ವಿಶ್ವಾಸವಿದೆ. ನಮ್ಮ ಬ್ಯಾಟಿಂಗ್ ಸದೃಢವಾಗಿದೆ. ಬೌಲಿಂಗ್ ನಲ್ಲಿಯೂ ಸಮನರಾಗಿರುತ್ತಾರೆ ಎಂದರು.

ಅನುಭವಿ ಆಟಗಾರ ರೋಹಿತ್ ಶರ್ಮಾ ಇದೀಗ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಅವರು ಆರಂಭಿಕರಾಗಿ 7 ಶತಕಗಳನ್ನು ಹೊಂದಿದ್ದಾರೆ. ಆದರೆ, ರೋಹಿತ್ ಮತ್ತು ಸುಭ್ಮನ್ ಗಿಲ್ ಆರಂಭಿಕರಾಗಿ ಇಂಗ್ಲೆಂಡ್ ನಲ್ಲಿ ಆಡಿಲ್ಲ, ಅವರಿಗೂ ಸವಾಲ್ ಗೊತ್ತಿದೆ. ಅವರು ಬೇಗನೆ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕು ಎಂದು ವಿಶ್ವಕಪ್ ಹಿರೋ ಯುವರಾಜ್ ಸಿಂಗ್ ಹೇಳಿದ್ದಾರೆ. 

ಗಿಲ್ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ, ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಆಸ್ಟ್ರೇಲಿಯಾದಲ್ಲಿ ತೋರಿದ ಪ್ರದರ್ಶನವನ್ನು ಮತ್ತೆ ತೋರಬೇಕಾಗಿದೆ. ಅವರು ಉತ್ತಮ ಪ್ರದರ್ಶನದ ನಂಬಿಕೆ ಹೊಂದರೆ, ವಿಶ್ವದ ಎಲ್ಲಾ ಕಡೆಯೂ ಉತ್ತಮ ಪ್ರದರ್ಶನ ತೋರಬಹುದಾಗಿದೆ ಎಂದು ಯುವರಾಜ್ ಸಿಂಗ್ ತಿಳಿಸಿದರು.

ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿ ಸೇರಿದಂತೆ ಧೀರ್ಘ ಪ್ರವಾಸದ ಸಂದರ್ಭದಲ್ಲಿ ಬಯೊ- ಬಬಲ್ ಒಳಗೆ ವಾಸಿಸಬೇಕಾದರೆ ಎದುರಿಸುವಂತಹ ಸವಾಲಿನ ಕುರಿತಂತೆ ಯುವರಾಜ್ ಸಿಂಗ್ ಮಾತನಾಡಿದರು.

SCROLL FOR NEXT