ಕ್ರಿಕೆಟ್

ಆರ್‌ಸಿಬಿ ತಂಡ ಸೇರಿಕೊಂಡ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್

Nagaraja AB

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹದಿನಾಲ್ಕನೇ ಆವೃತ್ತಿ ಎರಡನೇ ಚರಣದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡವನ್ನು ಸೇರಿಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ಜೊತೆಗೆ ಆರ್‌ಸಿಬಿ ತಂಡದವರೇ ಆದ ಮೊಹಮ್ಮದ್ ಸಿರಾಜ್ ಕೂಡ ಮ್ಯಾಂಚೆಸ್ಟರ್‌ನಿಂದ ದುಬೈಗೆ ಆಗಮಿಸಿ ತಂಡದ ಇತರ ಸದಸ್ಯರು ಉಳಿದುಕೊಂಡಿರುವ ಹೋಟೆಲ್ ಸೇರಿಕೊಂಡರು. 

ಟೀಂ ಇಂಡಿಯಾದಲ್ಲಿ ಕೋವಿಡ್-19 ಆತಂಕದ ನಡುವೆ ಇಂಗ್ಲೆಂಡ್- ಭಾರತ ನಡುವಿನ ಐದನೇ ಟೆಸ್ಟ್ ರದ್ದಾಗುವುದರೊಂದಿಗೆ ಸರಣಿ ಅಕಾಲಿಕವಾಗಿ ಅಂತ್ಯಗೊಂಡಿದೆ. ಚಾರ್ಟೆಡ್ ವಿಮಾನದಲ್ಲಿ ಕೊಹ್ಲಿ ಹಾಗೂ ಸಿರಾಜ್ ದುಬೈ ತಲುಪಿದ್ದು, ಐಪಿಎಲ್ ಅಭ್ಯಾಸದಲ್ಲಿ ತೊಡಗಲಿದ್ದಾರೆ.  ಈ ಇಬ್ಬರು ಆಟಗಾರರಿಗೆ ಆರ್ ಸಿಬಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ವಾಗತ ಕೋರಲಾಗಿದೆ. 

ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಕೆಕೆಆರ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 24 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಹೋರಾಟ ನಡೆಸಲಿದೆ. 

SCROLL FOR NEXT