ಕ್ರಿಕೆಟ್

ಕೋವಿಡ್ ನಿಂದ ಪಂದ್ಯ ಮುಂದೂಡಿಕೆ: ದೇಶಿ ಆಟಗಾರರಿಗೆ ಪರಿಹಾರ, ಶುಲ್ಕ ಹೆಚ್ಚಳ ಘೋಷಿಸಿದ ಬಿಸಿಸಿಐ

Lingaraj Badiger

ನವದೆಹಲಿ: 2020-21ರಲ್ಲಿ ಮಹಾಮಾರಿ ಕೊರೋನಾ ವೈರಸ್ ಪರಿಣಾಮ ಪಂದ್ಯಗಳು ಮುಂದೂಡಿಕೆ ಅಥವಾ ರದ್ದಾದ ಪರಿಣಾಮ ದೇಶಿ ಕ್ರಿಕೆಟಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಪರಿಹಾರವಾಗಿ ಪಂದ್ಯದ ಶುಲ್ಕವನ್ನು ಶೇ .50 ರಷ್ಟು ಹೆಚ್ಚುವರಿಯಾಗಿ ನೀಡಲಾಗುವುದು ಮತ್ತು ಮುಂಬರುವ ಋತುವಿನಲ್ಲಿ ಅವರ ಸಂಭಾವನೆಯನ್ನು ಹೆಚ್ಚಿಸಲಾಗುವುದು ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ರಣಜಿ ಟ್ರೋಫಿಯನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ರದ್ದುಗೊಳಿಸಲಾಗಿತ್ತು. ಇದುರಿಂದ ಅನೇಕ ಭಾರತೀಯ ಕ್ರಿಕೆಟಿಗರು ಆರ್ಥಿಕವಾಗಿ ತೊಂದರೆಗೀಡಾದರು. ಈ ಆಟಗಾರರಿಗೆ ಬಿಸಿಸಿಐ ಪರಿಹಾರ ಪ್ಯಾಕೇಜ್ ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು.

"2019-20 ದೇಶೀಯ ಋತುವಿನಲ್ಲಿ ಭಾಗವಹಿಸಿದ ಕ್ರಿಕೆಟಿಗರಿಗೆ ಕೋವಿಡ್ -19 ಪರಿಸ್ಥಿತಿಯಿಂದಾಗಿ 2020-21ರ ಋತುವಿನಲ್ಲಿ ನಷ್ಟವಾಗಿ ಶೇ. 50 ರಷ್ಟು ಹೆಚ್ಚುವರಿ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ" ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಸೋಮವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪರಿಹಾರ ನೀಡುವ ಮತ್ತು ಪಂದ್ಯ ಶುಲ್ಕವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. 

40ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಹಿರಿಯ ರಣಜಿ ಕ್ರಿಕೆಟಿಗರಿಗೆ ಪ್ರತಿ ದಿನದ ಶುಲ್ಕವನ್ನು ಸಹ ಸುಮಾರು 60,000ಕ್ಕೆ ದ್ವಿಗುಣಗೊಳಿಸಲಾಗಿದೆ. ಇದರಿಂದ ಆಟಗಾರರು ಪ್ರತಿ ಪ್ರಥಮ ದರ್ಜೆ ಪಂದ್ಯಕ್ಕೆ 2.40 ಲಕ್ಷ ರೂ. ಗಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

21 ರಿಂದ 40 ಪಂದ್ಯಗಳನ್ನು ಆಡಿದವರಿಗೆ ದಿನಕ್ಕೆ 50,000 ರೂ. ನೀಡಲಾಗುತ್ತದೆ. ಆದರೆ ಅದಕ್ಕಿಂತ ಕಡಿಮೆ ಅನುಭವ ಹೊಂದಿರುವ ಆಟಗಾರರಿಗೆ ದಿನಕ್ಕೆ 40,000 ರೂ. ಸಂಭಾವನೆ ನೀಡಲಾಗುತ್ತದೆ ಎಂದು ಶಾ ಹೇಳಿದ್ದಾರೆ.

SCROLL FOR NEXT