ಕ್ರಿಕೆಟ್

ಲೆಜೆಂಡ್ಸ್ ಲೀಗ್ ಗಲಾಟೆ: 'ಹಿರಿಯರೆಂದರೆ ಗೌರವವಿಲ್ಲ, ಸಹ ಆಟಗಾರರೊಂದಿಗೆ ಯಾವಾಗಲೂ ಜಗಳ'; ಗಂಭೀರ್ ಬಗ್ಗೆ ಶ್ರೀಶಾಂತ್ ವಾಗ್ದಾಳಿ

Srinivasamurthy VN

ಮುಂಬೈ: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಮೈದಾನದಲ್ಲಿ ನಡೆದ ಗಲಾಟೆ ಇದೀಗ ಮತ್ತೊಂದು ಮಜಲು ಪಡೆದುಕೊಂಡಿದ್ದು ಇದೀಗ ಶ್ರೀಶಾಂತ್ ನೇರವಾಗಿ ಸುದ್ದಿಗೋಷ್ಠಿಯಲ್ಲೇ ಗಂಭೀರ್ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.

ಹೌದು.. ಸೂರತ್ ನಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2023 ಕೂಟದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವು ಮಾಜಿ ಆಟಗಾರರ ಸೆಣಸಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ಎಸ್.ಶ್ರೀಶಾಂತ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದು, ಬುಧವಾರ ಸೂರತ್ ನ ಲಾಲಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವೇಗಿ ಶ್ರೀಶಾಂತ್ ಕ್ಯಾಪಿಟಲ್ಸ್ ತಂಡದ ನಾಯಕ ಗಂಭೀರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಗಂಭೀರ್ ಬ್ಯಾಟಿಂಗ್ ಮಾಡುವಾಗ, ಅವರು ಶ್ರೀಶಾಂತ್ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು, ನಂತರ ಅಂಪೈರ್‌ ಗಳು ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು. ಪಂದ್ಯದ ಬಳಿಕ ಮಾತನಾಡಿದ ಶ್ರೀಶಾಂತ್, ಯಾವುದೇ ಕಾರಣವಿಲ್ಲದೆ ಗಂಭೀರ್ ತನ್ನನ್ನು ಕೆಣಕಿದ್ದರು. ಸಹ ಆಟಗಾರರನ್ನು ಗೌರವಿಸಿದ ಗಂಭೀರ್ ನಡೆಯಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

“ಯಾವುದೇ ಕಾರಣವಿಲ್ಲದೆ ಯಾವಾಗಲೂ ತನ್ನ ಎಲ್ಲಾ ಸಹ ಆಟಗಾರರೊಂದಿಗೆ ಜಗಳವಾಡುವ ಮಿಸ್ಟರ್ ಫೈಟರ್‌ ನೊಂದಿಗೆ ಏನಾಯಿತು ಎಂಬುದರ ಕುರಿತು ತಿಳಿಸಲು ನಾನು ಬಯಸುತ್ತೇನೆ. ಅವರು ವೀರೂ ಭಾಯ್ ಮತ್ತು ಬಹಳಷ್ಟು ಜನರನ್ನು ಒಳಗೊಂಡಂತೆ ತಮ್ಮದೇ ಆದ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ. ಅಂತಹುದೇ ಘಟನೆ ಇಂದು ಸಂಭವಿಸಿದೆ.

ಯಾವುದೇ ಪ್ರಚೋದನೆಯಿಲ್ಲದೆ, ಅವರು ನನ್ನನ್ನು ರೇಗಿಸುತ್ತಿದ್ದರು, ಇದು ತುಂಬಾ ಅಸಭ್ಯವಾಗಿತ್ತು. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಅವರು ಬಳಸಿದ ಪದಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರು ಹೇಳಿದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಶ್ರೀಶಾಂತ್ ಹೇಳಿದರು.
 

SCROLL FOR NEXT